ವಿಜಯ್ ಹಾನಗಲ್

ಸೋಮವಾರಪೇಟೆ, ಸೆ.೧: ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಬೆಳೆಗಾರರಿಗೆ ಬಿಳಿಕಾಂಡಕೊರಕ ಕೀಟ ಕಂಟಕಪ್ರಾಯವಾಗಿ ಪರಿಣಮಿಸಿದೆ. ಫಸಲಿನ ಗಿಡಗಳನ್ನೇ ಗುರಿಯಾಗಿಸಿಕೊಂಡು ಈ ಕೀಟ ಧಾಳಿ ನಡೆಸುತ್ತಿದ್ದು, ಬೆಳೆಗಾರ ವರ್ಗ ಪ್ರತಿ ವರ್ಷವೂ ಫಸಲಿನೊಂದಿಗೆ ಗಿಡಗಳನ್ನೂ ಕಳೆದುಕೊಳ್ಳಬೇಕಾದ ಸಂಕಷ್ಟಕ್ಕೆ ಒಳಗಾಗುತ್ತಿದೆ.

ಮಳೆಗಾಲದಲ್ಲಿ ಬಿಸಿಲ ಧಗೆ ಹೆಚ್ಚಾದಂತೆ, ಕಾಫಿ ತೋಟದಲ್ಲಿ ಬಿಳಿಕಾಂಡಕೊರಕ ಹಾವಳಿ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಆತಂಕಗೊAಡಿದ್ದಾರೆ. ರೋಗ ಪೀಡಿತ ಕಿತ್ತ ಕಾಫಿ ಗಿಡಗಳನ್ನು ತೋಟದ ಸಮೀಪ ಸಂಗ್ರಹಿಸಿಡುತ್ತಿರುವ ಪರಿಣಾಮ ಬಿಳಿಕಾಂಡಕೊರಕ ಕೀಟಬಾಧೆ ಆರೋಗ್ಯವಂತ ಗಿಡಗಳನ್ನು ಬಾಧಿಸುತ್ತಿವೆ.

ಕೊರೊನಾ ಹಿನ್ನೆಲೆಯಲ್ಲಿ ಕಾಫಿ ಬುಡಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆಯೂ ಇಲ್ಲ; ಕೊಳ್ಳುವವರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಿತ್ತ ಕಾಫಿ ಬುಡಗಳನ್ನು ಕೆಲವರು ಬೆಂಕಿ ಹಾಕಿ ಸುಟ್ಟರೆ, ಇನ್ನು ಕೆಲವರು ತೋಟದ ಸಮೀಪವೇ ಹಾಕುತ್ತಿದ್ದಾರೆ. ಇಂತಹ ಬುಡದೊಳಗೆ ಇರುವ ಕೀಟ, ಹೊರಬಂದು ಮತ್ತೆ ತೋಟದೊಳಗಿನ

(ಮೊದಲ ಪುಟದಿಂದ) ಆರೋಗ್ಯವಂತ ಗಿಡಕ್ಕೆ ಸೇರುತ್ತಿದೆ. ಬೋರರ್‌ಗೆ ತುತ್ತಾದ ಕಾಫಿ ಗಿಡಗಳನ್ನು ಪ್ರತಿ ವರ್ಷವೂ ಕೀಳಲೇಬೇಕಾದ ಪರಿಸ್ಥಿತಿ ಇದೆ. ಕಳೆದ ವರ್ಷ ಒಂದು ಕಾಫಿ ಬುಡಕ್ಕೆ ೧೦ ರಿಂದ ೧೫ ರೂ. ಬೆಲೆ ಇತ್ತು. ಪ್ರಸಕ್ತ ವರ್ಷ ೫ ರೂ.ಗಳಿಗೆ ಕೆಲವರು ಖರೀದಿ ಮಾಡುತ್ತಿದ್ದಾರೆ. ಹಿಂದೆ ಮೈಸೂರು, ಹಾಸನ ಜಿಲ್ಲೆಯ ಹೊಗೆಸೊಪ್ಪು ಬೆಳೆಗಾರರು, ಕಾಫಿ ಬುಡಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಕೃಷಿ ಚಟುವಟಿಕೆ ಕಡಿಮೆಯಾಗಿರುವ ಪರಿಣಾಮ ಕೊಳ್ಳುವವರೂ ಇಲ್ಲವಾಗಿದ್ದಾರೆ.

ಇದರೊಂದಿಗೆ ಮಳೆಗಾಲದಲ್ಲಿ ಬಿಸಿಲಿನ ವಾತಾವರಣ ನಿರ್ಮಾಣವಾದರೆ ಕಾಂಡಕೊರಕ ಕೀಟಗಳ ಸಂತಾನೋತ್ಪತಿ ಹೆಚ್ಚಾಗುತ್ತದೆ. ಕೆಲವೇ ದಿನಗಳಲ್ಲಿ ಕಾಫಿ ಗಿಡಗಳ ಕಾಂಡದೊಳಗೆ ಸೇರಿ, ಕೊರೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಕಾಫಿ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಡೀ ತೋಟವೇ ಕಾಂಡಕೊರಕ ಕೀಟಕ್ಕೆ ಬಲಿಯಾಗುತ್ತದೆ. ಇದರಿಂದಾಗಿ ಭಾರೀ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಬಿಳಿಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ ೫ ವರ್ಷಗಳು ಬೇಕಾಗುತ್ತದೆ. ಕಾಫಿ ತೋಟಗಳಲ್ಲಿ ಫಸಲು ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿರುವುದರಿಂದ ಕಾಫಿ ತೋಟದ ನಿರ್ವಹಣೆ ಅಸಾಧ್ಯ ಎಂದು ತೋಳೂರುಶೆಟ್ಟಳ್ಳಿಯ ಬೆಳೆಗಾರ ಸುಧಾಕರ್ ಅಭಿಪ್ರಾಯಿಸಿದ್ದಾರೆ.

ಅರೇಬಿಕಾ ತೋಟಗಳಲ್ಲಿ ಮಾತ್ರ ಬಿಳಿಕಾಂಡಕೊರಕ (ಕ್ರೆöÊಲೋಟ್ರೀಕಸ್‌ಕ್ವಾಡ್ರಿಪಸ್) ಹಾವಳಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಅತೀಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದೆ. ಒಟ್ಟು ೨೮,೫೪೦ಹೆ. ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ೨೨,೯೪೦ಹೆ. ನಲ್ಲಿ ಅರೇಬಿಕಾ, ೫,೬೦೦ ಹೆ.ನಲ್ಲಿ ರೋಬಾಸ್ಟಾ ಬೆಳೆಯಲಾಗುತ್ತಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದ್ದು, ಇಲ್ಲಿ ಕೀಟಬಾಧೆ ಹೆಚ್ಚಾಗಿದೆ.

ಏಕರೆಯೊಂದರಲ್ಲಿ ೭೦೦ ರಿಂದ ೮೦೦ ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ ನೂರು ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗಿವೆ. ಕಿತ್ತ ಗಿಡಗಳನ್ನು ಕೂಡಲೆ ಸುಟ್ಟು ನಾಶಪಡಿಸಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು ಬೆಳೆಗಾರರು ಹೇಳಿದ್ದಾರೆ.

ಪ್ರತಿವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕೀಟ ಪೀಡಿತ ಗಿಡಗಳನ್ನು ತೆಗೆಯಬೇಕು. ಕ್ರಿಮಿನಾಶಕ ಸಿಂಪಡಿಸಬೇಕು. ಜುಲೈನಿಂದ, ಸೆಪ್ಟಂಬರ್ ಒಳಗೆ ತೋಟದಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು. ನಂತರ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಕೀಟ ನಿಯಂತ್ರಣದ ಕೆಲಸದ ಪುನರಾವರ್ತನೆ ಮಾಡಬೇಕು ಎಂದು ಕೀಟತಜ್ಞರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಬಿಳಿಕಾಂಡಕೊರಕ ಪೀಡಿತ ಕಾಫಿ ಗಿಡಗಳನ್ನು ಕಿತ್ತು ಕೂಡಲೆ ಸುಡಬೇಕು. ತೋಟದ ಬದಿಯಲ್ಲಿ ಸಂಗ್ರಹ ಮಾಡಬಾರದು. ಈ ಬಗ್ಗೆ ಎಲ್ಲಾ ಬೆಳೆಗಾರರಿಗೆ ತಿಳುವಳಿಕೆ ನೀಡಲಾಗಿದೆ. ಬುಡಗಳನ್ನು ೧೫ ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಟ್ಟು, ನಂತರ ಮಾರಾಟ ಮಾಡಬಹುದು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ಮಾತ್ರ ರೋಗಬಾಧೆ ಹತೋಟಿ ಸಾಧ್ಯ. ಇಲ್ಲವಾದರೆ ಬೋರರ್ ಕೀಟವನ್ನು ಬೆಳೆಗಾರರೇ ಪೋಷಿಸಿದಂತಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಗೋಪಾಲ್ ನಾಯಕ್ ಅಭಿಪ್ರಾಯಿಸಿದ್ದಾರೆ.