ಕುಶಾಲನಗರ, ಆ. ೧೯: ಹಾಲು ಕರೆಯಲು ತೆರಳಿದ ವೃದ್ಧೆಗೆ ಹಸುವೊಂದು ತಿವಿದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲನಗರದ ಬಸಪ್ಪ ಬಡಾವಣೆಯ ನಿವಾಸಿ ನಿವೃತ್ತ ಶುಶ್ರೂಷಕಿ ಸಾವಿತ್ರಿ (೬೫) ಎಂಬವರು ಮೃತಪಟ್ಟ ದುರ್ದೈವಿ.

ಗುರುವಾರ ಮಹಿಳೆ ಕುಶಾಲನಗರದಿಂದ ಕೊಪ್ಪ ಸಮೀಪದಲ್ಲಿರುವ ತನ್ನ ತೋಟಕ್ಕೆ ತೆರಳಿ ಹಾಲು ಕರೆಯುವ ಸಂದರ್ಭ ಹಸುವೊಂದು ತಿವಿದಿದೆ. ಈ ಸಂದರ್ಭ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಮಹಿಳೆಯ ತಲೆ ಗೋಡೆಗೆ ಬಡಿದಿದೆ. ಇದರಿಂದ ತೀವ್ರ ಪೆಟ್ಟಾಗಿ ಕುಸಿದು ಬಿದ್ದಿದ್ದಾರೆ. ಅತಿಯಾದ ರಕ್ತಸ್ರಾವ ಉಂಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಸಾವಿತ್ರಿ ಅವರು ಕುಶಾಲನಗರದ ವೈದ್ಯರಾಗಿದ್ದ ದಿ. ಶಿವರಾಮ್ ನಾಯಕ್ ಅವರ ಪತ್ನಿಯಾಗಿದ್ದು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.