ಸೋಮವಾರಪೇಟೆ, ಜು. ೨೬: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಪಟ್ಟಣ ಪಂಚಾಯ್ತಿಗೆ ಸೇರಿದ ೧೨ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪಂಚಾಯಿತಿ ಕಚೇರಿ ಕಟ್ಟಡದಲ್ಲಿರುವ ಮೂರು ಅಂತಸ್ತಿನ ಒಟ್ಟು ೧೨ ಮಳಿಗೆಗಳ ಪೈಕಿ ೭ ಮಳಿಗೆಗಳು ಹರಾಜಾಗಿದ್ದು, ೨ನೇ ಅಂತಸ್ತಿನ ೪ ಮಳಿಗೆಗಳ ಬಗ್ಗೆ ಯಾರೂ ಆಸಕ್ತಿ ತೋರದ್ದರಿಂದ ಹರಾಜು ನಡೆಯಲಿಲ್ಲ. ಇದರೊಂದಿಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ೧ ಅಂಗಡಿಗೆ ಬಿಡ್‌ದಾರರು ಮುಂದೆ ಬರದಿದ್ದರಿಂದ ಹಾಗೆಯೇ ಉಳಿಯಿತು.

ಸರ್ಕಾರದ ನಿಯಮದಂತೆ ಎಲ್ಲಾ ಮಳಿಗೆಗಳಿಗೂ ತಲಾ ೧.೫ ಲಕ್ಷ ಮುಂಗಡ ಹಣ ನಿಗದಿಗೊಳಿಸಲಾಗಿತ್ತು. ನೆಲ ಅಂತಸ್ತಿಗೆ ಸರ್ಕಾರಿ ಸವಾಲ್ ೫೧೦೦ ಬಾಡಿಗೆ, ಮೊದಲ ಅಂತಸ್ತಿಗೆ ೪೫೦೦ ಬಾಡಿಗೆ ನಿಗದಿ ಪಡಿಸಿ ಬಾಡಿಗೆ ಮೊತ್ತವನ್ನು ಹರಾಜು ಕೂಗಲಾಯಿತು., ನೆಲ ಅಂತಸ್ತಿನಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಮಳಿಗೆ ಬಾಡಿಗೆ ಹಾಗೂ ಜಿ.ಎಸ್.ಟಿ ಸೇರಿ ರೂ.೧೩,೭೫೦, ಉಳಿದಂತೆ ೩ ಮಳಿಗೆಗಳು ರೂ. ೧೪,೧೬೦, ರೂ.೧೫,೩೪೦, ರೂ.೧೬೦೪೮, ಮೊದಲ ಅಂತಸ್ತಿನ ೩ ಮಳಿಗೆಗಳು ರೂ. ೭,೬೭೦, ೭,೧೯೮, ೭,೧೯೮ ಗಳಿಗೆ ಬಿಡ್‌ದಾರರು ಪಡೆದುಕೊಂಡರು.

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೨೮ ಮಂದಿ ಪಾಲ್ಗೊಂಡಿದ್ದರು. ಪ್ರಭಾರ ಅಧ್ಯಕ್ಷ ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ವೆಂಕಟೇಶ್, ಶುಭಕರ, ಜೀವನ್, ಮಹೇಶ್, ಚಂದ್ರು, ಎಸ್.ಮಹೇಶ್, ಸೋಮೇಶ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿಗಳು ಹರಾಜು ಪ್ರಕ್ರಿಯೆ ನಡೆಸಿದರು.