ಮಡಿಕೇರಿ, ಜು. ೨೦: ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ತರಬೇತಿ ಪಡೆಯಲು ಇರಬೇಕಾದ ಅರ್ಹತೆ ಹಾಗೂ ನಿಬಂಧನೆಗಳು ಇಂತಿವೆ : ಸರ್ಕಾರಿ ಆದೇಶದಂತೆ ೨೦೦೨ರ ಮಾರ್ಚ್, ೩೦ ರನ್ವಯ ಅಭ್ಯರ್ಥಿಗಳು ವರ್ಗ-೧ ಮತ್ತು ಪ್ರವರ್ಗ-೨ಎ, ೩ಎ, ೩ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರವರ್ಗ-೧ ರ ಅಭ್ಯರ್ಥಿಗಳಿಗೆ ರೂ. ೩.೫೦ ಲಕ್ಷ ಹಾಗೂ ಪ್ರವರ್ಗ-೨ ಎ ,೩ಎ ೩ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.೨.೫೦ ಲಕ್ಷ ಒಳಪಟ್ಟಿರಬೇಕು. ಪ್ರವರ್ಗ-೧ ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
ಪ್ರವರ್ಗ-೧ ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರ ವರ್ಗಗಳಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದು ೨ ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರವರ್ಗ-೧ರ ಅಭ್ಯರ್ಥಿಗಳಿಗೆ ೪೦ ವರ್ಷದೊಳಗೆರಬೇಕು, ಪ್ರವರ್ಗ ೨ಎ ,೩ಎ ೩ಬಿ ರ ಅಭ್ಯರ್ಥಿಗಳಿಗೆ ೩೮ ವರ್ಷದೊಳಗಿರಬೇಕು.
ಅಭ್ಯರ್ಥಿಯು ತನ್ನ ಹೆಸರನ್ನು ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿರಬೇಕು. ಕಾನೂನು ತರಬೇತಿಯು ೪ ವರ್ಷಗಳ ಅವಧಿಯಾಗಿದ್ದು ಮಾಸಿಕ ರೂ. ೪ ಸಾವಿರದಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯಿಂದ ಹಿಂದುಳಿದ ವರ್ಗಗಳ ೨೦ ಅಭ್ಯರ್ಥಿಗಳಿಗೆ ನೀಡಲು ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಗೆ ಹೋಗುವ ಮುನ್ನ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟಲ್ಲಿ ತರಬೇತಿ ವೆಚ್ಚಕ್ಕೆ ಶೇ. ೧೦ ರಂತೆ ಬಡ್ಡಿ ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ.೧೦೦ ರ ಛಾಪಾ ಕಾಗದದಲ್ಲಿ ಬರೆದುಕೊಡತಕ್ಕದ್ದು.
ಅರ್ಜಿ ನಮೂನೆ ಪಡೆದು ಆಗಸ್ಟ್ ೩೧ ರೊಳಗಾಗಿ ಕಚೇರಿ ವೇಳೆಯಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂ: ೦೮೨೭೨-೨೯೫೬೨೮ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೇವರಾಜ ಅರಸು ಭವನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮ್ಯಾನ್ಸ್ ಕಾಂಪೌAಡ್ ಹತ್ತಿರ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅವರು ತಿಳಿಸಿದ್ದಾರೆ.