ಮುಳ್ಳೂರು, ಜೂ. ೨೨: ಶನಿವಾರಸಂತೆ ಪ್ರೆಸ್ ಕ್ಲಬ್‌ನ ೨ನೇ ವರ್ಷದ ವಾರ್ಷಿಕೋತ್ಸವವನ್ನು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಸಾಂಕೇತಿಕ ಮತ್ತು ಸರಳವಾಗಿ ಗಣಪತಿ ಹೋಮದೊಂದಿಗೆ ಆಚರಿಸಲಾಯಿತು.

ವಾರ್ಷಿಕೋತ್ಸವದ ಸರಳ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶನಿವಾರಸಂತೆ ನೂತನ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗಿದೆ, ಸರಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಂತಹ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ ಎಂದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಎಸ್.ಎನ್. ರಘು, ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್, ದಾನಿ ಮತ್ತು ವಕೀಲರಾದ ಎಸ್.ವಿ. ಜಗದೀಶ್ ಮಾತನಾಡಿದರು. ಈ ಸಂದರ್ಭ ಅರ್ಚಕ ಮಹಂತೇಶ್ ಭಟ್, ಹಿರಿಯ ಪತ್ರಕರ್ತ ಎಸ್.ಎಸ್. ಭಾಸ್ಕರ್, ಪ್ರಮುಖರಾದ ಕುಮಾರಸ್ವಾಮಿ, ಶಮೀರ್ ಮುಂತಾದವರು ಹಾಜರಿದ್ದರು.