ವೀರಾಜಪೇಟೆ, ಜೂ. ೧೬: ಕೊರೊನಾ ಮಾರ್ಗಸೂಚಿಯ ಷರತ್ತು ಉಲ್ಲಂಘಿಸಿದ ವಾಹನಗಳಿಂದ ನಗರ ಪೊಲೀಸರು ಒಟ್ಟು ರೂ. ೯೮೦೦೦ ದಂಡ ವಸೂಲಿ ಮಾಡಿದ್ದಾರೆ.

ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಜಗದೀಶ್ ದೂಳಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಳೆದ ಮೇ ತಿಂಗಳ ಕೊರೊನಾ ಷರತ್ತು ಉಲ್ಲಂಘನೆಯ ವಾಹನ ದಾಳಿಯಲ್ಲಿ ೭೮ ದ್ವಿಚಕ್ರ ವಾಹನಗಳು, ೭೭ ನಾಲ್ಕು ಚಕ್ರದ ವಾಹನಗಳು ಹಾಗೂ ೧೫ ಮೂರು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಈ ಪೈಕಿ ೩೭ ವಾಹನಗಳಿಗೆ ಷರತ್ತು ಬದ್ಧ ಎಚ್ಚರಿಕೆ ನೀಡಿ ಕಳಿಸಲಾಗಿತ್ತು. ಉಳಿದ ೧೩೩ ವಾಹನಗಳಿಂದ ದಂಡ ವಸೂಲಿ ಮಾಡಲಾಗಿದೆ. ಕೊರೊನಾ ಪೂರ್ತಿಯಾಗಿ ಪರಿಹಾರ ಕಾಣುವವರೆಗೆ ದಾಳಿ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.