ಮಡಿಕೇರಿ, ಜೂ. ೭: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆ ಡಿಸಿಐಬಿ ಘಟಕ ಯಶಸ್ವಿಯಾಗಿದೆ.
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆ ರಸ್ತೆಯ ಸಮೀಪದ ಮನೆಯೊಂದರಲ್ಲಿ ಅಕ್ರಮವಾಗಿ ಯಾರಿಗೂ ತಿಳಿಯದಂತೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಿದ ಡಿಸಿಐಬಿ ತಂಡವು ದಾಳಿ ನಡೆಸಿ ಮಾಲು ಸಮೇತ ಆರು ಮಂದಿಯನ್ನು ವಶಕ್ಕೆ ಪಡೆದಿದೆ.
ತ್ಯಾಗರಾಜಕಾಲೋನಿಯ ಎಂ.ಎ. ಅಸ್ಕರ್ ಆಲಿ, ಅಬ್ದುಲ್ ರಹೀಂ, ಮಹದೇವಪೇಟೆಯ ಜಬೀವುಲ್ಲಾ ಎಂ., ಸುಂಟಿಕೊಪ್ಪದ ಸಪಾನ್ ಅಹಮ್ಮದ್, ಆಜಾದ್ ನಗರದ ನೌಷಾದ್ ಆಲಿ ಎಂ.ಕೆ., ಭಗವತಿ ನಗರದ
ಡಿ.ಆರ್. ಸುರೇಶ್ ಎಂಬವರುಗಳನ್ನು ಬಂಧಿಸಲಾಗಿದೆ.(ಮೊದಲ ಪುಟದಿಂದ) ಬಂಧಿತ ಆರೋಪಿಗಳಿಂದ ಅಂದಾಜು ೫೦ ಸಾವಿರ ರೂ. ಮೌಲ್ಯದ ೪೧೫ ಗ್ರಾಂ ಗಾಂಜಾ ಮತ್ತು ನಗದು, ೩೫,೭೬೦ ರೂ.ಗಳನ್ನು ಅಮಾನತ್ತುಪಡಿಸಿ ಕೊಳ್ಳಲಾಗಿದೆ. ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಡಿಸಿಆರ್ಬಿ ಇನ್ಸ್ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಸಿಬ್ಬಂದಿಗಳಾದ ಎಎಸ್ಐ ಹಮೀದ್, ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್ ಮತ್ತು ಮಹೇಶ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರು ಗೌಪ್ಯವಾಗಿ ಮಾಹಿತಿ ನೀಡಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ಬಗ್ಗೆ ಕಡಿವಾಣ ಹಾಕಲು ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದಾರೆ.