ಶನಿವಾರಸಂತೆ, ಮೇ 9: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ ಚೆಕ್‍ಪೋಸ್ಟ್‍ಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್‍ರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಕೋವಿಡ್ ಲಾಕ್‍ಡೌನ್ ಕರ್ತವ್ಯಕ್ಕೆ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳು ಜಿಲ್ಲೆಗೆ ಬಂದವರ ಕೈಗಳಿಗೆ ಸೀಲ್ ಹಾಕಿರುವ ಬಗ್ಗೆ ಮಾಹಿತಿ ಪಡೆದು ಮೇಲ್ವಿಚಾರಣೆ ನಡೆಸಲಿದ್ದಾರೆ. ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದರು. ಇದೇ ಸಂದರ್ಭ ಗಾಳಿ -ಮಳೆಗೆ ಹಗಲು - ರಾತ್ರಿ ಕರ್ತವ್ಯ ನಿರ್ವಹಿಸಲು ಶೆಡ್ ಇಲ್ಲದೆ ಅನಾನುಕೂಲವಾಗಿರುವ ಬಗ್ಗೆ ತಪಾಸಣಾ ಅಧಿಕಾರಿಗಳು ತಹಶೀಲ್ದಾರರ ಗಮನಕ್ಕೆ ತಂದರು. ಸ್ಪಂದಿಸಿದ ತಹಶೀಲ್ದಾರ್ ಅವರ ಸೂಚನೆಯಂತೆ ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ತಾತ್ಕಾಲಿಕ ಸುಸಜ್ಜಿತ ಶೆಡ್ ಅನ್ನು ಕಂದಾಯ ಪರಿವೀಕ್ಷಕ ಮನುಕುಮಾರ್ ನಿರ್ಮಾಣ ಮಾಡಿಸಿಕೊಟ್ಟರು.