ವೀರಾಜಪೇಟೆ, ಏ. ೨: ನಿಲುಗಡೆ ಮಾಡಿದ್ದ ವಾಹನವನ್ನು ಕಳವು ಮಾಡಿದ ಅಂರ‍್ರಾಜ್ಯ ಆರೋಪಿಯನ್ನು ಮಿಂಚಿನ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಆರೋಪಿ ಹಲವು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

ವೃತ್ತಿಯಲ್ಲಿ ಚಾಲಕನಾಗಿರುವ ಕೇರಳ ರಾಜ್ಯದ, ಕಣ್ಣೂರು ಜಿಲ್ಲೆಯ ಆಲಕೊಡ್ ಮನ್ನಕಡವ್ ಅಂಚೆ, ಚಿಕಾಡ್ ಕೊಲ್ಲಕುನ್ನಲ್ ಹೌಸ್ ನಿವಾಸಿ ಶರಣ್ ಎಸ್. (೨೫) ಬಂಧಿತ ಆರೋಪಿ.ಪ್ರಕರಣದ ಹಿನ್ನೆಲೆ : ಆರೋಪಿಯು ಕೇರಳ ರಾಜ್ಯದ ವಿವಿಧ ಠಾಣೆಯಲ್ಲಿ ಕಳವು ಪ್ರಕರಣಗಳ ಆರೋಪಿ ಎಂದು ತನಿಖೆ

(ಮೊದಲ ಪುಟದಿಂದ) ವೇಳೆಯಲ್ಲಿ ತಿಳಿದುಬಂದಿದೆ. ಗಾಂಜಾ ವ್ಯಸನಿಯಾಗಿರುವ ಶರಣ್ ವೀರಾಜಪೇಟೆ ಸಮೀಪದ ಬಿಟ್ಟಂಗಾಲ ನಿವಾಸಿ ಕೆ.ಎನ್. ಜಗನ್ ಎಂಬವರು ತಮ್ಮ ಮಾರುತಿ ಒಮ್ನಿ ಕಾರನ್ನು (ಕೆಎ-೦೩ಎಂ-೩೧೬೭) ತಾ. ೦೧ ರಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಧ್ಯಾಹ್ನ ಮನೆಗೆ ಊಟಕ್ಕೆಂದು ತೆರಳಿ ಹಿಂದಿರುಗುವ ವೇಳೆ ಕಾಣೆಯಾಗಿದೆ. ವಾಹನ ಕಳವಾಗಿರುವುದು ತಿಳಿದ ಮಾಲೀಕ ಕಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ವಾಹನ ಸಿಗದ ಹಿನ್ನೆಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು ತಾ. ೨ ರಂದು ಬೆಳಿಗ್ಗೆ ೧೧ ರ ಸಮಯದಲ್ಲಿ ಮಾಕುಟ್ಟ ವಲಯದಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭ ಕಳವಾದ ವಾಹನವು ಮಾರ್ಗದಲ್ಲಿ ಕಾಣಿಸಿಕೊಂಡಿದೆ. ವಾಹನ ಸಹಿತ ಆರೋಪಿಯನ್ನು ಈ ಸಂದರ್ಭ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಗೆ ಒಳಪಡಿಸಿದ ವೇಳೆಯಲ್ಲಿ ಬಿಟ್ಟಂಗಾಲದಿAದ ಕಳವು ಮಾಡಿದ ವಾಹನವನ್ನು ಅಜ್ಞಾತ ಸ್ಥಳದಲ್ಲಿರಿಸಿದ್ದೆ ಇಂದು ಕೇರಳಕ್ಕೆ ತೆರಳುತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಮಾ.೨೧ ರಂದು ರಾತ್ರಿ ವೇಳೆಯಲ್ಲಿ ವೀರಾಜಪೇಟೆ ಮೀನುಪೇಟೆಯಲ್ಲಿ ಅಂಗಡಿಯ ಮುಂದೆ ಶನೀಶ್ ಎಂಬುವವರಿಗೆ ಸೇರಿದ ಮಾರುತಿ ಒಮ್ನಿ ಕಾರನ್ನು (ಕೆಎ-೧೨ಎನ್-೨೦೨೧) ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ವಾಹನದಲ್ಲಿ ಮೈಸೂರು ಮತ್ತು ಇತರ ಸ್ಥಳಗಳಿಗೆ ತೆರಳಿ ಇಂಧÀನ ಖಾಲಿಯಾದ ನಂತರ ಅಜ್ಞಾತ ಸ್ಥಳದಲ್ಲಿ ಅಡಗಿಸಿ ತಾ. ೦೧ ರಂದು ಮತ್ತೊಂದು ಕಳ್ಳತನಕ್ಕೆ ಮುಂದಾಗಿದ್ದ ಎಂದು ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ.

ವಶಕ್ಕೆ ಪಡೆದಿರುವ ವಾಹನಗಳ ಒಟ್ಟು ಮೌಲ್ಯ ೩ ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈತನ ಮೇಲೆ ವೀರಾಜಪೇಟೆ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ೩೭೯ ಐ.ಪಿ.ಸಿ ಕಾಯ್ದೆ ವಾಹನ ಕಳವು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧÀನಕ್ಕೆ ಆದೇಶವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ನಿರ್ದೇಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್ ಶ್ರೀಧರ್, ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಸಿದ್ದಲಿಂಗ ಬಾಣಸೆ, ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿಗಳಾದ ಹೆಚ್.ಎಸ್. ಬೋಜಪ್ಪ, ಜಗದೀಶ್ ಧೂಳ ಶೆಟ್ಟಿ, ಗ್ರಾಮಾಂತರ ಠಾಣೆಯ ಎ.ಎಸ್.ಐ. ಶ್ರೀಧರ್, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರು ಕುಮಾರ್, ರಾಮಪ್ಪ, ಪ್ರದೀಪ್, ಮುನೀರ್, ಸಂತೋಷ್, ಮಹೇಂದ್ರ, ಕಾರ್ತಿಕ್ ಮತ್ತು ಚಾಲಕ ಸಂದೀಪ್ ಅವರುಗಳು ಕಾರ್ಯಾಚರಣೆಯಲ್ಲಿ ಇದ್ದರು.