ಮೂರ್ನಾಡು, ಫೆ. ೧೨: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ನೂತನ ಸದಸ್ಯರುಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸಾರ್ವಜನಿಕ ಬದುಕಿನಲ್ಲಿ ಏನನ್ನೂ ನಿರೀಕ್ಷೆ ಮಾಡದೆ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಮಾಡುವಂತೆ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ನಿಸಾರ್ ಅಹಮದ್ ಕರೆ ನೀಡಿದರು.

ಮೂರ್ನಾಡಿನ ಶಾದಿ ಮಹಲ್‌ನಲ್ಲಿ ರೈಟ್ ತಿಂಕರ್ಸ್ ಕೊಡಗು ವಾಟ್ಸಾಪ್ ಗುಂಪಿನ ಸದಸ್ಯರು ಆಯೋಜಿಸಿದ ಮುಸ್ಲಿಂ ಸಮುದಾಯದ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಡವರು, ವಿಧವೆಯರು ಸೇರಿದಂತೆ ನೊಂದವರಿಗೆ ಸ್ಪಂದಿಸುವ ಗುಣವನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ನಮ್ಮವರು ಎಂದು ಯಾವುದೇ ಭೇದ ಭಾವ ಇಲ್ಲದೆ ಜನರಿಗೆ ಸೇವೆ ಮಾಡಿದರೆ ಸಾರ್ವಜನಿಕ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮೂರ್ನಾಡು ಮಸೀದಿಯ ಖತೀಬ್ ಸುಲೈಮಾನ್ ಸಖಾಫಿ ಪ್ರಾರ್ಥಿಸಿ ಮುಹಮ್ಮದ್ ಆದಿಲ್ ವಂದಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ಕಲೀಲ್ ಕ್ರಿಯೇಟಿವ್, ಮುಹಮ್ಮದ್ ಮುಸ್ತಫ, ಝೈನುಲ್ ಆಬಿದ್ (ಸಮಾಜ ಸೇವೆ), ಮುನೀರ್ ಮಾಸ್ಟರ್ ಮೂರ್ನಾಡು, ಲತೀಫ್ ಮಾಸ್ಟರ್ (ಶಿಕ್ಷಣ), ಡಾ. ಅಬ್ದುಲ್ಲಾ (ವೈದ್ಯಕೀಯ), ಮುಸ್ತಫ ಸಿದ್ದಾಪುರ (ಮಾಧ್ಯಮ), ಉಬೈಸ್ ಅಬೂಬಕ್ಕರ್ ಸುಂಟಿಕೊಪ್ಪ, ರಂಶಾದ್ ಪಾಲಿಬೆಟ್ಟ, ಸಂಶಾದ್ (ಕ್ರೀಡೆ), ಮುಹಮ್ಮದ್ ಹನೀಫ್ (ಕೃಷಿ) ಅವರುಗಳನ್ನು ಸನ್ಮಾನಿಸಲಾಯಿತು.

‘ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಮತ್ತು ಹೊಣೆಗಾರಿಕೆ’ ಎಂಬ ವಿಷಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ವಿಷಯ ಮಂಡಿಸಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರಾದ ಅಮೀನ್ ಮೊಹಿಸಿನ್, ಇಸ್ಮಾಯಿಲ್ ನಾಪೋಕ್ಲು, ಅಬೂಬಕ್ಕರ್ ಹಾಜಿ, ಉಸ್ಮಾನ್ ಹಾಜಿ, ಖಾದರ್, ಮಜೀದ್, ಮನ್ಸೂರ್ ಅಲಿ, ಹಂಸ, ಹಕೀಂ, ಇಸಾಕ್ ಖಾನ್, ಅಲಿ ಹಸನ್, ಮೈಸಿ, ಮೈಮಾ ಅಧ್ಯಕ್ಷ ಖಾದರ್, ಕಾರ್ಯದರ್ಶಿ ನಿಚ್ಚು ಮೂರ್ನಾಡು, ಜಮಾಅತ್ ಅಧ್ಯಕ್ಷ ಮಜೀದ್ ಸೇರಿದಂತೆ ಮತ್ತಿತರರು ಇದ್ದರು.

ರೈಟ್ ತೀಕರ್ಸ್ ಬಳಗದ ಅಬ್ದುಲ್ ರಹೂಫ್ ಸ್ವಾಗತಿಸಿ, ಬಶೀರ್ ಅಲಿ ವಂದಿಸಿ, ನಿಯಾಝ್ ಸುಂಟಿಕೊಪ್ಪ ನಿರೂಪಿಸಿದರು.