ಪೊನ್ನಂಪೇಟೆ, ಫೆ. ೯: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್.ಎಸ್.ಎಫ್.)ನ ಗೋಣಿಕೊಪ್ಪಲು ಸೆಕ್ಟರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಪೊನ್ನಂಪೇಟೆ ಸಮೀಪದ ಹುದೂರಿನ ಕಾಟ್ರಕೊಲ್ಲಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾಟ್ರಕೊಲ್ಲಿಯ ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧೀನದ ಮದರಸ ಸಭಾಂಗಣದಲ್ಲಿ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಬ್ಲಡ್ಡ್ ಸೈಬೊ, ಎಸ್.ಎಸ್.ಎಫ್. ಕಾಟ್ರಕೊಲ್ಲಿ ಶಾಖೆ ಹಾಗೂ ಮಡಿಕೇರಿಯ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಎಂ. ಎ. ಆಲಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಹಿರಿಯ ಮುಖಂಡ, ಕಾಟ್ರಕೊಲ್ಲಿ ಮೊಹಿದ್ದೀನ್ ಜುಮಾ ಮಸೀದಿಯ ೧ನೇ ತಕ್ಕ ಮುಖ್ಯಸ್ಥರಾದ ಆಲೀರ ಎ. ಎರಮು ಹಾಜಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಲೀರ ಎಂ. ರಶೀದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಾಜಿ ಅಚ್ಚುತ್ತನ್ ಮೊದಲಾದವರು ರಕ್ತದಾನದ ಮಹತ್ವದ ಕುರಿತು ಮಾತನಾಡಿದರು.

ರಕ್ತದಾನದ ಅಗತ್ಯತೆ ಮತ್ತು ಅನಿವಾರ್ಯತೆ ಕುರಿತು ಮಡಿಕೇರಿಯ ವೈದ್ಯಕೀಯ ಕಾಲೇಜಿನ ಡಾ. ಕರುಂಬಯ್ಯ ವಿಶೇಷ ಉಪನ್ಯಾಸ ನೀಡಿದರು. ಎಸ್.ಎಸ್.ಎಫ್. ಗೋಣಿಕೊಪ್ಪ ಸೆಕ್ಟರ್ ಘಟಕದ ಅಧ್ಯಕ್ಷರಾದ ನವಾಸ್ ಮದನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫೀ ಸಹದಿ ಉಸ್ತಾದರು ಪ್ರಾಸ್ತಾವಿಕ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್.ನ ಗೋಣಿಕೊಪ್ಪಲು ಕೇಂದ್ರದ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್, ಕಾಟ್ರಕೊಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯ ೨ನೇ ತಕ್ಕ ಮುಖ್ಯಸ್ಥ ಚೀರಂಡ ಪಾಪು, ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಪುಂಜೆರ ಹನೀಫ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ. ಅನೀಸ್, ಎ.ಇ. ಹ್ಯಾರಿಸ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಸ್ತಫಾ ಸಖಾಫಿ ಉಸ್ತಾದ್ ಸ್ವಾಗತಿಸಿ ವಂದಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರೂ ಆಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಆಲೀರ ಎಂ. ರಶೀದ್ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.