ಮಡಿಕೇರಿ, ಫೆ. ೮: ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಚೌಡ್ಲು ಗ್ರಾ.ಪಂ.ಯ ವಾರ್ಡ್ ಸಂಖ್ಯೆ ೩ ರಲ್ಲಿ ಬಿಸಿಎಂ “ಬಿ” ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿ ಎನ್.ಟಿ. ಪರಮೇಶ್ ಅವರು ಜಯಗಳಿಸಿದ್ದು, ಈ ಆಯ್ಕೆ ಕಾನೂನು ಬಾಹಿರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಪರಮೇಶ್ ಅವರು ನಂ. ೨ ಸಿವಿಲ್ ವರ್ಕ್ ಗುತ್ತಿಗೆದಾರರಾಗಿದ್ದು, ಜಿಎಸ್‌ಟಿ ಮತ್ತು ವಾಣಿಜ್ಯ ತೆರಿಗೆ ಪಾವತಿದಾರರಾಗಿದ್ದಾರೆ. ಇವರ ಆದಾಯದ ಮಿತಿ ಬಿಸಿಎಂ “ಬಿ” ಗೆ ಮೀರಿದ್ದಾಗಿದೆ. ಶಾಸಕರ ಕುಮ್ಮಕ್ಕಿನಿಂದ ಚುನಾವಣಾ ನೀತಿಯನ್ನು ಮೀರಿ ಸ್ಪರ್ಧಿಸಿ ಜಯ ಗಳಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.

ಚುನಾವಣಾ ನೀತಿ ಉಲ್ಲಂಘಿಸಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.