ಸಿದ್ದಾಪುರ, ಜ. ೬: ಗರ್ಭ ಧರಿಸಿದ ಹಸು ಸೇರಿದಂತೆ ಎರಡು ಕರುಗಳನ್ನು ವ್ಯಕ್ತಿಯೋರ್ವರು ಕಟ್ಟಿಹಾಕಿ ಬಂಧನದಲ್ಲಿರಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನಾಲ್ಕು ದಿನಗಳಿಂದ ಬಿಡದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ಎದುರಾಯಿತು.

ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ಹನೀಫ ಎಂಬವರು ಗರ್ಭ ಧರಿಸಿದ ಹಸು ಹಾಗೂ ಎರಡು ಕರುವನ್ನು ಭಾನುವಾರದಂದು ಗುಹ್ಯ ಗ್ರಾಮದ ರಸ್ತೆ ಬದಿಯಲ್ಲಿ ಕಟ್ಟಿಹಾಕಿದ್ದರು. ಮಧ್ಯಾಹ್ನ ಊಟ ಮುಗಿಸಿ ಬಂದಾಗ ಹಸು ಹಾಗೂ ಕರು ಕಾಣೆಯಾಗಿದ್ದು, ಹುಡುಕಾಡಿದರೂ ಸಿಗಲಿಲ್ಲ. ಸೋಮವಾರದಂದು ಹಸು ಹಾಗೂ ಕರುವನ್ನು ಸಮೀಪದ ನರೇಂದ್ರ ನಾಯ್ಡು ಎಂಬವರು ಕಟ್ಟಿಹಾಕಿರುವದು ತಿಳಿದು ಬಂದಿದೆ.

ಜಾನುವಾರುಗಳನ್ನು ಬಿಡುವಂತೆ ಹನೀಫ ಮನವಿ ಮಾಡಿದರೂ ಬಿಡದ್ದರಿಂದ ಮಂಗಳವಾರದAದು ಹನೀಫ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಾಲ್ಕು ದಿನವಾದರೂ ಜಾನುವಾರುಗಳನ್ನು ಬಿಡದ್ದರಿಂದ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ನರೇಂದ್ರ ನಾಯ್ಡು ವಿರುದ್ಧ ದೂರು ನೀಡಿದ್ದರೂ ಪೊಲೀಸರು ಅವರನ್ನು ಕರೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ, ಜಾನುವಾರುಗಳಿಗೆ ಚಿತ್ರಹಿಂಸೆ ನೀಡಿ, ಅಕ್ರಮವಾಗಿ ಜಾನುವಾರುಗಳನ್ನು ವಶದಲ್ಲಿ ಇಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಜೇಶ್, ಪ್ರಜಿತ್, ಶಾಜಿ, ಹಬೀಬ್, ರಶೀದ್, ರಿಜೇಶ್, ಪ್ರವೀಣ್, ಶಾಹುಲ್ ಸೇರಿದಂತೆ ಇನ್ನಿತರರು ಇದ್ದರು.