ಕುಶಾಲನಗರ, ಡಿ. 16: ಸಾರ್ವಜನಿಕ ಜಾಗದಲ್ಲಿ ಕಸ ಎಸೆದಿರುವ ಬಗ್ಗೆ ಪಟ್ಟಣ ಪಂಚಾಯ್ತಿಗೆ ಸ್ಥಳೀಯ ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನಲೆಯಲ್ಲಿ ಪಂಚಾಯ್ತಿ ಅಧಿಕಾರಿಗಳು ಕಸ ಎಸೆದ ಏಜೆನ್ಸಿಯೊಂದಕ್ಕೆ ದಂಡ ವಿಧಿಸಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರ ಗೌಡ ಸಮಾಜ ರಸ್ತೆ ವ್ಯಾಪ್ತಿಯ ಎಪಿಎಂಸಿ ಸಭಾಂಗಣ ಎದುರುಗಡೆ ಮನೆ ಗೋಡೆ ಬಳಿ ಕಸದ ರಾಶಿ ಹಾಕುತ್ತಿರುವ ಬಗ್ಗೆ ನಿವೃತ್ತ ಬ್ಯಾಂಕ್ ಅಧಿಕಾರಿ ಸೂದನ ರತ್ನಾವತಿ ಎಂಬವರು ಪಂಚಾಯ್ತಿಗೆ ದೂರು ನೀಡಿದ ಹಿನ್ನಲೆಯಲ್ಲಿ ಕಸದ ರಾಶಿಯಲ್ಲಿ ದೊರೆತ ಮಾಹಿತಿ ಅನ್ವಯ ಗಂಗಾ ಫಾರ್ಮಸಿ ಎಂಬ ಏಜೆನ್ಸಿಗೆ ಪಂಚಾಯ್ತಿ ಮುಖಾಂತರ ದಂಡ ವಿಧಿಸಲಾಯಿತು. ಸ್ಥಳಕ್ಕೆ ಕುಶಾಲನಗರ ಪಪಂ ಅಧ್ಯಕ್ಷರಾದ ಜೈವರ್ಧನ್, ಪಂಚಾಯ್ತಿ ಆರೋಗ್ಯಾಧಿಕಾರಿ ಉದಯಕುಮಾರ್, ಪೌರಕಾರ್ಮಿಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.