ಮಡಿಕೇರಿ, ಡಿ. 15: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ತಾ. 19 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ “ಐನ್‍ಮನೆಯ ಬಗ್ಗೆ ವಿಚಾರ ಸಂಕಿರಣ” ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣನ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಭಾಗವಹಿಸಲಿದ್ದಾರೆ. ನಂತರ “ದಿ ವ್ಯಾನಿಶಿಂಗ್ ಕೊಡವಾಸ್”ನ ಲೇಖಕಿ ಕಂಬೀರಂಡ ಕಾವೇರಿ ಪೊನ್ನಪ್ಪ ಅವರು “ಐನ್‍ಮನೇಸ್: ದ ಕಾಂಟೆಕ್ಸ್ಟ್ ಅಂಡ್ ಕಂಟಿನ್ಯೂಯಿಟಿ” ಎಂಬ ವಿಷಯದ ಕುರಿತಾಗಿ ಭಾಷಣ ಮಾಡಲಿದ್ದಾರೆ. ನಂತರ ವಿಚಾರಗೋಷ್ಠಿ ನಡೆಯಲಿದೆ.

ಮುಖ್ಯ ಭಾಷಣಕಾರರಾಗಿ ಹಿರಿಯ ಸಂಶೋಧಕಿ ಹಾಗೂ “ಐನ್‍ಮನೇಸ್ ಆಫ್ ಕೊಡಗು” ಪುಸ್ತಕದ ಲೇಖಕಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಮುಂಬೈನ ಎಸ್‍ಎನ್‍ಡಿಟಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ದೇಶಕಿ ಮತ್ತು ನಿವೃತ್ತ ಪ್ರಾಧ್ಯಪಕಿ ಪ್ರೊ. ವೀಣಾ ಪೂಣಚ್ಚ, ಆರ್ಕಿಟೆಕ್ಟ್ ನಡಿಕೇರಿಯಂಡ ಧ್ಯಾನ್ ಬೆಳ್ಯಪ್ಪ ಇವರು “ಐನ್‍ಮನೆರ ಪುನಃಶ್ಚೇತನ” ವಿಷಯದ ಕುರಿತಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಕಿ ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ ಇವರು ಭಾಗವಹಿಸಲಿದ್ದಾರೆ.

ವಿಚಾರಗೋಷ್ಠಿ -03: ಮಧ್ಯಾಹ್ನ 12.45 ರಿಂದ 1.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ “ಕೊಡಗ್‍ರ ಕೈಮಡ” ಈ ವಿಷಯದ ಕುರಿತಾಗಿ ಮಾದೇಟಿರ ಬೆಳ್ಯಪ್ಪ ಮಾಜಿ ಸದಸ್ಯರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇವರು ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ನಾಗೇಶ್ ಕಾಲೂರು ಅವರು ಭಾಗವಹಿಸಲಿದ್ದಾರೆ.

ವಿಚಾರಗೋಷ್ಠಿ -04: ಮಧ್ಯಾಹ್ನ 2 ರಿಂದ 2.45 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ “ಐನ್‍ಮನೆರ ನಿರ್ವಹಣೆಲ್ ಯುವ ಜನಾಂಗತ್‍ರ ಜವಾಬ್ದಾರಿ” ಈ ವಿಷಯದ ಕುರಿತಾಗಿ ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್‍ನ ಅಧ್ಯಕ್ಷ ಚೋಕಂಡ ಸೂರಜ್ ಸೋಮಯ್ಯ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಪಾದ್ರಿ ಪುತ್ತಾಮನೆ ಅನಿತಾ ಜೀವನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಚಾರಗೋಷ್ಠಿ-05: ಐನ್‍ಮನೆಗೆ ಸಂಬಂಧಿಸಿದ ವಿಚಾರಮಂಡನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಲೇಖಕ ಮತ್ತು ಪತ್ರಕರ್ತ ಚಿಲ್ಲಾಜಮ್ಮನ ನಾ. ಸೋಮೇಶ್ ಮತ್ತು ವೀರಾಜಪೇಟೆಯ ಜೆ.ಎಫ್.ಜಿ.ಸಿ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಅಣ್ಣಾಳಪಂಡ ಧರ್ಮಶೀಲ ಅಜಿತ್ ಇವರು ಭಾಗವಹಿಸಲಿದ್ದಾರೆ. ತದನಂತರ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದ ಸಂಚಾಲಕರಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ಬಾಚಮಂಡ ಗೌರಮ್ಮ ಮಾದಮ್ಮಯ್ಯ, ತೇಲಪಂಡ ಕವನ್ ಕಾರ್ಯಪ್ಪ ಹಾಗೂ ಉಪ ಸಂಚಾಲಕರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಕಾಳಿಮಾಡ ಎಂ. ಪೂಣಚ್ಚ ಮತ್ತು ಕಂಬೆಯಂಡ ಡೀನಾ ಬೋಜಣ್ಣ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಿದೆ. ಹಾಗೂ ವಿವಿಧ ಐನ್‍ಮನೆಗಳ ಚಿತ್ರದ ಪ್ರದರ್ಶನವಿರುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.