ಮಡಿಕೇರಿ, ಡಿ. 14: ವನ್ಯಜೀವಿ ಛಾಯಾಗ್ರಾಹಕರು ಕಾಡುಪ್ರಾಣಿ, ಪಕ್ಷಿ ಚಿತ್ರ ತೆಗೆದು ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಮಾತ್ರವಲ್ಲ ಅವರಲ್ಲಿ ಮಾನವೀಯತೆ ಇರುತ್ತದೆ ಎನ್ನುವುದಕ್ಕೆ ಕೊಡಗಿನ ಬರ್ಡ್ ಮ್ಯಾನ್ ಗಣೇಶ್ ಸಾಕ್ಷಿಯಾಗಿದ್ದಾರೆ.

ಇತ್ತೀಚೆಗಷ್ಟೆ ಪಕ್ಷಿ ವೀಕ್ಷಣೆಗೆಂದು ಸಿದ್ದಾಪುರ ಸುತ್ತಮುತ್ತ ತೆರಳುತ್ತಿದ್ದ ಸಂದರ್ಭ, ಮಾಲ್ದಾರೆ ಸಮೀಪದ ಕೆರೆಯ ಬಳಿ ಹರಿದುಹೋಗುತ್ತಿದ್ದ ತೋಡಿನಲ್ಲಿ ಸಣ್ಣ ಚೀರಾಟ ಕೇಳಿ ಬಂದಿದ್ದು ಅತ್ತ ದೌಡಾಯಿಸುವ ಸಂದರ್ಭ ಒಂದು ಸಣ್ಣ ಕಾಲಿನ ಹಾಲಿನ ಮೈಬಣ್ಣದ ಕೊಕ್ಕರೆ ಉರುಳಿಗೆ ಸಿಕ್ಕಿ ಬಿದ್ದಿರುವ ದೃಶ್ಯ ಕಂಡುಬಂದಿದೆ. ಪಕ್ಕದಲ್ಲೇ ಇರುವ ಹಾಡಿವಾಸಿಗಳು, ಕಾಡು ಕೋಳಿ, ಕುಂಡ ಕೋಳಿ, ನೀರು ನಾಯಿ ಹೀಗೆ ಯಾವುದಾದರೂ ಪ್ರಾಣಿಯನ್ನು ಕೊಲ್ಲಲು ಹಾಕಿದ್ದ ಉರುಳಿಗೆ ಕೊಕ್ಕರೆ ಸಿಕ್ಕಿದ್ದು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದ ಸಂದರ್ಭ ಗಣೇಶ್ ರಕ್ಷಣೆ ಮಾಡಿದ್ದಾರೆ. ಕಾಲಿಗೆ ಯಾವುದೇ ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲ ಎಂದು ಹೇಳಿರುವ ಗಣೇಶ್, ರಕ್ಷಣೆ ಮಾಡುತ್ತಿದ್ದಂತೆ ಬದುಕಿತು ಬಡ ಜೀವ ಎನ್ನುವಂತೆ ತನ್ನ ದಾರಿ ಹಿಡಿಯಿತು ಈ "ಹೇರಾನ್" ಅರ್ಥಾತ್ ಕೊಕ್ಕರೆ.