ಸುಂಟಿಕೊಪ್ಪ, ಡಿ. 13: 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಮೃತಪಟ್ಟ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಧನ ಸಹಾಯ ರೂ. 25,000 ಗಳನ್ನು ವಿತರಿಸಲಾಯಿತು.

7ನೇ ಹೊಸಕೋಟೆ ನಂದಾದೀಪ ಸ್ವಸಹಾಯ ಸಂಘದ ಸದಸ್ಯೆಯಾಗಿರುವ ಕೆ. ಶ್ವೇತಾ ಅವರ ಪತಿ ರವಿ ಎಂಬವರು ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ರೋಗದಿಂದ ತುತ್ತಾಗಿ ಇತ್ತೀಚೆಗೆ ನಿಧನ ಹೊಂದಿದ್ದರು.

ಬಡತನ ಬೇಗೆಯಲ್ಲಿ ಇರುವ ಕುಟುಂಬದ ಸಮಸ್ಯೆಯನ್ನು ಮನಗಂಡ ಸ್ವ ಸಹಾಯ ಸಂಘದ ಸದಸ್ಯರು ಯೋಜನಾಧಿಕಾರಿಗಳ ಮುಖಾಂತರ ಧರ್ಮಸ್ಥಳದ ಧರ್ಮಗುರುಗಳಾದ ವೀರೇಂದ್ರ ಹೆಗಡೆ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸಮಸ್ಯೆಯನ್ನು ಆಲಿಸಿದ ಧರ್ಮಾಧಿಕಾರಿಗಳು ಸೋಮವಾರಪೇಟೆ ತಾಲೂಕು ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ಯೋಜನಾಧಿಕಾರಿ ವೈ. ಪ್ರಕಾಶ್ ಅವರ ಮುಖಾಂತರ ಮೃತ ರವಿ ಕುಟುಂಬಕ್ಕೆ ಧನ ಸಹಾಯ ವಿತರಿಸಿದರು.

ಸುಂಟಿಕೊಪ್ಪ ವಲಯದ ಮೇಲ್ವಿಚಾರಕಿ ಪುಷ್ಪಲತಾ, ಏಳನೇ ಹೊಸಕೋಟೆ ಒಕ್ಕೂಟದ ಸೇವಾ ಪ್ರತಿನಿಧಿ ನಿರ್ಮಲ ಪ್ರಕಾಶ, ಒಕ್ಕೂಟದ ಅಧ್ಯಕ್ಷೆ ಮಂಜುಳ ಪ್ರಕಾಶ್, ಸದಸ್ಯೆ ಮಂಗಳ, ಮಾಜಿ ಅಧ್ಯಕ್ಷರುಗಳಾದ ಮಂಜುಳ ಜನಾರ್ಧನ, ಪುಷ್ಪ ರುಕ್ಮಯ್ಯ, ಮಾಜಿ ಉಪಾಧ್ಯಕ್ಷೆ ಉಷಾ ಇತರರು ಇದ್ದರು.