ಮಡಿಕೇರಿ, ಡಿ. 11: ಕೊಡಗು ಜಿಲ್ಲೆಯಲ್ಲಿ ವಿನಾಯಿತಿಯಂತೆ ಕೋವಿ ಪರವಾನಗಿ ನವೀಕರಣ ಹಾಗೂ ಹೊಸದಾಗಿ ಕೋವಿ ಖರೀದಿ ಸಂದರ್ಭದಲ್ಲಿ ನಿಯಮಾನುಸಾರ ಕ್ರಮ ಅನುಸರಿಸಲಾಗುತ್ತಿದೆ ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಪ್ರಶ್ನಿಸಿದ್ದು, ಇದರಲ್ಲಿ ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿರುವ ಗೃಹ ಸಚಿವರು ಭಾರತ ಆಯುಧ ಕಾಯ್ದೆ 2016 ರನ್ವಯ ಹಾಗೂ ಸರಕಾರದ ನಿರ್ದೇಶನದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಪೊಲೀಸ್ ವರದಿಯನ್ನು ಪಡೆದು ಜಿಲ್ಲಾಧಿಕಾರಿ ಅವರಿಂದ ನಿಯಮಾನುಸಾರ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.