*ಗೋಣಿಕೊಪ್ಪಲು, ನ. 20: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆಚೌಕೂರು ಬಫರ್ ಜೋನ್ ಗೆ ಸೇರಿದ ಚೆನ್ನಂಗಿ ಅಣ್ಣಿಗೆರೆ ಬಸವೇಶ್ವರ ತೇಗದ ನೆಡು ತೋಪಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಣೆಗೆ ಯತ್ನಿಸುತ್ತಿದ್ದ ಮೊಯಿದ್ದೀನ್ ಎಂಬಾತನನ್ನು ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಇತರ ಐವರು ಆರೋಪಿಗಳಾದ ಚೆನ್ನಂಗಿಯ ರವಿ ಆಲಿಯಾಸ್ ಕ್ವಿಂಟಾಲ್, ಮಂಜು ಬಿನ್ ಮಿಟ್ಟು, ನಾಗೇಶ್ ಬಿನ್ ಅಣ್ಣಯ್ಯ, ಗಣಪತಿ ಬಿನ್ ಕಾಳಪ್ಪ ಎಂಬವರು ತಲೆ ಮರೆಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಆರ್ ಎಫ್.ಒ.ವೈ.ಕೆ. ಕಿರಣ್ ಕುಮಾರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಚನ್ನವೀರೇಶ್ ಗಾಣಗೇರ, ಎಂ.ಜೆ.ಸತೀಶ್ ಕುಮಾರ್, ಅರಣ್ಯ ರಕ್ಷಕ ಶಿವು, ತಿಮ್ಮಣ್ಣ, ನಾಗೇಶ್ ಪಾಲ್ಗೊಂಡಿದ್ದರು.