ಮಡಿಕೇರಿ, ನ. 12: ಸಂಕಷ್ಟದ ಬದುಕು ಸಾಗಿಸು ತ್ತಿರುವ ಆದಿವಾಸಿಗಳ ‘ಬುಡಕಟ್ಟು ಜನಾಂಗ’ ಸ್ಥಾನಮಾನವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಿತಿಯಲ್ಲಿರುವ ಕೊಡವರಿಗೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಒತ್ತಾಯಿಸುತ್ತಿರುವುದು ನ್ಯಾಯ ಸಮ್ಮತವಲ್ಲವೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷÀ ವೈ.ಕೆ. ಗಣೇಶ್ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಿಕರಲ್ಲಿ 18 ಸಮುದಾಯದವರಿದ್ದು, ಅವರÀಲ್ಲಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳವಣಿಗೆಯನ್ನು ಕಂಡಿರುವ ಕೊಡವರನ್ನು ಮಾತ್ರ ಬುಡಕಟ್ಟು ಜನರೆಂದು ಪರಿಗಣಿಸಬೇಕಿದ್ದರೆ ಆರ್ಥಿಕವಾಗಿ ದುರ್ಬಲರಾಗಿರುವ ಕೊಡಗಿನವರೇ ಆಗಿರುವ ಇತರರನ್ನೂ ಯಾಕೆ ಬುಡಕಟ್ಟು ಜನರೆಂದು ಪರಿಗಣಿಸಬಾರದು ಎಂದು ಪ್ರಶ್ನಿಸಿದರು.

ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆನ್ನುವ ಬೇಡಿಕೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ ಅವರು, ಈ ಬಗ್ಗೆ ಆದಿವಾಸಿ ಮುಖಂಡರೆಲ್ಲರು ಒಗ್ಗೂಡಿ ಸಭೆ ನಡೆಸಿ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಿಲ್ಲದ ಜೀತ ಪದ್ಧತಿ: ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದ್ದು, ಆದಿವಾಸಿಗಳನ್ನು ಜೀತದಾಳುಗಳನ್ನಾಗಿ ದುಡಿಸಿ ಕೊಳ್ಳುತ್ತಿರುವವರು ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ನೀಡದೆ ವಂಚಿಸುತ್ತಿದ್ದಾರೆ ಎಂದು ಗಣೇಶ್ ಆರೋಪಿಸಿದರು.

ಬುಡಕಟ್ಟು ಜನರೆಂದು ಪರಿಗಣಿಸಲ್ಪಟ್ಟಿರುವ ಎರವರು, ಕುರುಬರು, ಪಣಿಯರು ಮೊದಲಾದವರು ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿದ್ದು, ಇನ್ನೂ ಕಾಡುಗಳಲ್ಲಿ ಜೀವಿಸುತ್ತಿದ್ದಾರೆ. ಕಾಡಿನಿಂದ ಹೊರಗೆ ಬಂದಿರುವ ಬಹುತೇಕ ಮಂದಿ ಕೃಷಿ ಕಾರ್ಮಿಕರಾಗಿ, ತೋಟಗಳಲ್ಲಿ ಕಾರ್ಮಿಕರಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಖಜಾಂಚಿ ಜೆ.ಕೆ. ಪ್ರೇಮ ಹಾಗೂ ಸದಸ್ಯ ಪಿ.ಎಂ. ಮಣಿ ಉಪಸ್ಥಿತರಿದ್ದರು.