ಮಡಿಕೇರಿ, ನ. 6: 2020-21ನೇ ಆಯವ್ಯಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರು 10 ಹೆಚ್ಪಿವರೆಗಿನ ಸಾಮಥ್ರ್ಯದ ಪಂಪ್ಸೆಟ್ಗಳ ವಿದ್ಯುತ್ ಶುಲ್ಕ ಮನ್ನಾ ಮಾಡುವ ಬಗ್ಗೆ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ 10ಹೆಚ್ಪಿವರೆಗಿನ ವಿದ್ಯುತ್ ಪಂಪ್ಸೆಟ್ ಬಳಕೆ ಮಾಡುವ ಬೆಳೆಗಾರರ ಬಗ್ಗೆ ಮಾಹಿತಿ ನೀಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಇಂಜಿನಿಯರ್ ಮಡಿಕೇರಿ ಸೆಸ್ಕ್ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.ಲಿಖಿತ ಸೂಚನಾ ಪತ್ರದಲ್ಲಿ ಈ ಹಿಂದೆಯೂ ಮಾಹಿತಿ ನೀಡುವಂತೆ ಕೋರಿದ್ದರು. ಇದುವರೆಗೆ ಸಲ್ಲಿಸಲಾಗಿಲ್ಲ. ಹಾಗಾಗಿ ವಿಳಂಬ ಮಾಡದೆ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಹೊಣೆಗಾರರನ್ನಾಗಿ ಮಾಡುವುದಾಗಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ 10ಹೆಚ್ಪಿವರೆಗಿನ ವಿದ್ಯುತ್ ಪಂಪ್ಸೆಟ್ ಹೊಂದಿರುವ ಬೆಳೆಗಾರರು ವಿದ್ಯುತ್ ಸ್ಥಾವರ ಇರುವ ಜಾಗದ ಆರ್ಟಿಸಿ, ಆಧಾರ್ಕಾರ್ಡ್ ಪ್ರತಿ, ಇತ್ತೀಚಿನ ವಿದ್ಯುತ್ ಬಿಲ್, ಆರ್.ಆರ್. ಸಂಖ್ಯೆ, ದೂರವಾಣಿ ಸಂಖ್ಯೆ ಸಹಿತ ಮಾಹಿತಿ ನೀಡುವಂತೆ ಸೆಸ್ಕ್ ಕೋರಿದೆ.