ಮಡಿಕೇರಿ, ಅ. 30: ಮಾಧ್ಯಮ ಸ್ಪಂದನ ತಂಡದ ಮನವಿಗೆ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಕೊಡಗಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಉನ್ನತ ವಿದ್ಯಾಭ್ಯಾಸಕ್ಕೆ ಇದ್ದ ಆರ್ಥಿಕ ತೊಡಕು ನಿವಾರಣೆ ಆಗಿದೆ.

ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ನಿವಾಸಿ ಬಾಲಕೃಷ್ಣ ಅವರ ಪುತ್ರಿ ಬಿ.ಬಿ. ನಿಶ್ಮಿತಾ ಇದೀಗ ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಕಾಂ./ಸಿಎ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆಂದು ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ದಾನಿಗಳಿಂದ ಒಟ್ಟು 85,600 ರೂಪಾಯಿ ಸಂದಾಯವಾಗಿದೆ. ಶೇ.97 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿರುವುದರಿಂದ ಆಳ್ವಾಸ್ ವಿದ್ಯಾಸಂಸ್ಥೆ ಶುಲ್ಕದಲ್ಲಿ ಗಣನೀಯ ಇಳಿಕೆ ಮಾಡಿದೆ.

ಜರ್ಮನಿ, ದುಬೈ, ಮುಂಬೈನಲ್ಲಿ ನೆಲೆಸಿರುವ ಕೊಡಗು ಮೂಲದವರು, ಪತ್ರಕರ್ತರು ಸೇರಿದಂತೆ ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.