ಕೂಡಿಗೆ, ಅ. 30: ಕೂಡಿಗೆ ಸೈನಿಕ ಶಾಲೆಯಲ್ಲಿ 21ನೇ ಆಡಳಿತ ಮಂಡಳಿ ಸಭೆ ನಡೆಯಿತು. ಸೈನಿಕ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷರೂ, ಬೆಂಗಳೂರಿನ ವಾಯುಸೇನೆ ತರಬೇತಿ ವಿಭಾಗದ ಮುಖ್ಯಸ್ಥರಾದ ಏರ್ ವೈಸ್ ಮಾರ್ಷಲ್ ಪಿ.ಜೆ.ವಾಲಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಇದೇ ಸಂದರ್ಭ ಅವರು ಸಂಗೊಳ್ಳಿ ರಾಯಣ್ಣ ಅಬ್ಸ್ಟ್ಯಾಕಲ್ ಕೋರ್ಸ್‍ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಕೋರ್ಸ್‍ನ ಪ್ರಮುಖ ಉದ್ದೇಶ ವಿದ್ಯಾರ್ಥಿಗಳನ್ನು ಶಾರೀರಿಕವಾಗಿ ಸದೃಢಗೊಳಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಎಸ್‍ಎಸ್‍ಬಿ ಸಂದರ್ಶನವನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ. ಜೊತೆಗೆ ಇದು ಮಕ್ಕಳಲ್ಲಿ ವೈವಿಧ್ಯಮಯ ಕೌಶಲ್ಯಗಳೊಂದಿಗೆ, ಸ್ವಯಂ ಶಿಸ್ತು, ನಿರಂತರ ಪ್ರಯತ್ನ, ಧೈರ್ಯ, ಸಂಘಟಿತ ಕಾರ್ಯಾಚರಣೆ ಮೊದಲಾದ ಅಂಶಗಳನ್ನು ಒಳಗೊಂಡಿದ್ದು, ಅವರನ್ನು ಸಂಪನ್ಮೂಲಗೊಳಿಸುತ್ತದೆ ಎಂದರು.

ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಶಾಲೆಯ ತರಬೇತಿ ಹಾಗೂ ಆಡಳಿತವನ್ನು ಕುರಿತು ವಿವರಿಸುವುದರೊಂದಿಗೆ, ಕಳೆದ ಒಂಬತ್ತು ತಿಂಗಳಿನಲ್ಲಿ ಶಾಲೆಯು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸುವುದರೊಂದಿಗೆ, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್, ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪೆÇ್ರೀ. ವೈ ಶ್ರೀಕಾಂತ್, ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವ ಪೆÇ್ರ. ಆರ್ ಶಿವಪ್ಪ, ಮೈಸೂರಿನ (ಸಿ.ಪಿ. ಡಬ್ಲ್ಯೂಎಡಿ) ವಿಭಾಗದ ಕಾರ್ಯನಿರ್ವಹಣಾ ಅಭಿಯಂತರ ವಿಜಯ ಕುಮಾರ್ ಸ್ವರ್ಣಕಾರ್ ಹಾಗೂ ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಪಾಲ್ಗೊಂಡಿದ್ದರು.

ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಕೃಷ್ಣಜಿ ಎಸ್ ಕರಿಚನ್ನಣ್ಣನವರ್, ಹಣಕಾಸು ಇಲಾಖೆಯ ಅಧೀನ ಕಾರ್ಯದರ್ಶಿ ಮೂರ್ತಿ ಹಾಗೂ ಪೋಷಕರ ಪ್ರತಿನಿಧಿ ಡಾ ಜಯಭಾರತ್ ಮಡಿವಾಳಪ್ಪ ಮಂಗೆಶ್ಕರ್ ಆನ್‍ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.