*ಗೋಣಿಕೊಪ್ಪಲು, ಅ. 24 : ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಂದ ಸಿನಿಮಾ ನಟರು ಶಿಬಿರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಸಾಕಾನೆ ಒಂದರ ಮೇಲೆ ಸವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ಮೇಲೆ ಹುಣಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಮೊಕದ್ದಮೆ ದಾಖಲು ಮಾಡಿದ್ದಾರೆ.

ಬೆಂಗಳೂರಿನ ಧನ್ವೀರ್, ವಿಶ್ವಾಸ್ ಅಯ್ಯರ್, ದರ್ಶನ್ ಬೀನ್ ನಂದಕುಮಾರ್ ಹಾಗೂ ಇತರ ಮೂವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮತ್ತಿಗೋಡು ಸಾಕಾನೆ ಶಿಬಿರದ ಆರ್‍ಎಫ್‍ಒ ವೈ.ಕೆ. ಕಿರಣ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ತಾ. 23ರಂದು ಶಿಬಿರಕ್ಕೆ ಬಂದು ಮಹೇಂದ್ರ ಎಂಬ ಆನೆಯ ಮೇಲೆ ಕುಳಿತು ಸವಾರಿ ಮಾಡಿದ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿದ್ದರು.

ಇದು ವೈರಲ್ ಆದುದರ ಬಗ್ಗೆ ಗಮನಹರಿಸಿದ ಹುಣಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆರೋಪಿಗಳ ವಿಳಾಸವನ್ನು ಪತ್ತೆ ಹಚ್ಚಿದ ಬಳಿಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಕ್ಕೆ ಸಹಕರಿಸಿದ ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ನೋಟೀಸ್ ನೀಡಲಾಗಿದೆ ಎಂದು ಕಿರಣ್ ಕುಮಾರ್ ತಿಳಿಸಿದ್ದಾರೆ.

- ಎನ್.ಎನ್.ದಿನೇಶ್