ಸೋಮವಾರಪೇಟೆ,ಅ.16: ಜಿಲ್ಲಾ ಮತ್ತು ಸ್ಥಳೀಯ ಪೆÇಲೀಸ್ ಇಲಾಖೆ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಸಿಪಿಐ ಮಹೇಶ್ ಮಾತನಾಡಿ, ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗಿ ಹರಡುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಜಿಲ್ಲಾಡಳಿತ ಜಿಲ್ಲೆಯಲ್ಲಿ ತಾ.17 ರಂದು ಹಾಗೂ 26 ರಂದು ಪ್ರವಾಸೋದ್ಯಮವನ್ನು ನಿಷೇಧಿಸಿದೆ. ಈ ದಿನಗಳಲ್ಲಿ ಪ್ರವಾಸಿತಾಣಗಳಿಗೆ ಪ್ರವಾಸಿಗರು ತೆರಳುವಂತಿಲ್ಲ ಎಂದರು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಾಲಯದ ಆದೇಶದನ್ವಯ ಜಿಲ್ಲೆಯ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

ಎಲ್ಲ ರೆಸಾರ್ಟ್, ಹೋಂಸ್ಟೇ ಮತ್ತು ಹೊಟೇಲ್‍ಗಳಲ್ಲಿ ಸ್ಯಾನಿಟೈಸರ್ ಬಳಸಬೇಕು. ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಬಳಸಬೇಕು. ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದಷ್ಟು ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಬೇಕು. ಪ್ರವಾಸಿಗರು ಆಗಮಿಸಿದ ತಕ್ಷಣ ಉಷ್ಣತೆ ಪರೀಕ್ಷೆ ನಡೆಸಬೇಕು. ಪ್ರವಾಸಿಗರಿಗೆ ವೈರಸ್ ಹರಡುತ್ತಿರುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಹೊಟೇಲ್ ಮತ್ತು ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಮತ್ತು ಅತಿಥಿಗಳಿಂದ ಪ್ರಯಾಣ ಹಿನ್ನೆಲೆಯ ಮಾಹಿತಿ ಮತ್ತು ಅವರ ದಾಖಲೆಯನ್ನು ಪಡೆಯಬೇಕು. ಅವರ ಲಗೇಜುಗಳ ಸ್ಯಾನಿಟೈಸರ್ ಮಾಡಬೇಕು. ಒಂದು ಕೊಠಡಿಯಲ್ಲಿ ಗರಿಷ್ಠ ಇಬ್ಬರು ಅತಿಥಿಗಳಿಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ ನೀಡಬೇಕು. ನಾಲ್ಕು ಮಂದಿಗಿಂತ ಹೆಚ್ಚಿನ ಜನರು ಸೇರುವುದಕ್ಕೆ ಬಿಡಬಾರದು. ಊಟದ ಟೇಬಲ್‍ನಲ್ಲಿ ಗರಿಷ್ಠ ನಾಲ್ಕು ಜನರು ಕುಳಿತುಕೊಳ್ಳಲು ಅವಕಾಶ ಹಾಗೂ ಹಿರಿಯ ನಾಗರಿಕರು, ಗರ್ಭೀಣಿಯರು ಮತ್ತು ಮಕ್ಕಳಿಗೆ ನಾಡಿ ಮಿಡಿತದ ಮೂಲಕ ಪರೀಕ್ಷೆ ನಡೆಸಬೇಕೆಂದರು.

ರಾತ್ರಿ ಸಮಯದಲ್ಲಿ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಬಾರದು. ಯಾವುದೇ ಅತಿಥಿಗಳ ಬಗ್ಗೆ ಸಂಶಯ ಬಂದಲ್ಲಿ ಕೂಡಲೇ ಸಮೀಪದ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕಾರ್ಯಾಗಾರದಲ್ಲಿ ಠಾಣಾಧಿಕಾರಿ ವಿರೂಪಾಕ್ಷ ಮತ್ತು ವಿವಿಧ ರೆಸಾರ್ಟ್ ಮತ್ತು ಹೋಂಸ್ಟೇಗಳ ಮಾಲೀಕರು ಉಪಸ್ಥಿತರಿದ್ದರು.