ಮಡಿಕೇರಿ, ಅ. 9: ಮಡಿಕೇರಿ ನಗರದಲ್ಲಿ ಬಿಜೆಪಿ ವತಿಯಿಂದ ಶಾಸಕ ಅಪ್ಪಚ್ಚು ರಂಜನ್ ಪ್ರಾಯೋಜಕತ್ವದಲ್ಲಿ ಮಾಸ್ಕ್ ವಿತರಣೆ ನಡೆಯಿತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಜನ್, ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಈಗಾಗಲೇ ಸರ್ಕಾರ ಮಾಡುತ್ತಿದೆ. ಆದರೆ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ದಂಡ ವಸೂಲಿ ಮಾಡಿ ಆ ಹಣದಲ್ಲಿ ಸರ್ಕಾರವನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಮಾಡಿರುವ ಆರೋಪ ಖಂಡನೀಯ. ದಂಡ ಹಾಕುತ್ತಿರುವುದು ಕೊರೊನಾ ಬಗ್ಗೆ ಜನ ಜಾಗೃತರಾಗಲಿ ಎಂಬ ಕಾರಣಕ್ಕಾಗಿ ಅಷ್ಟೆ ಹೊರತು ದಂಡದ ಹಣದಿಂದ ಸರ್ಕಾರ ನಡೆಸುವ ದರ್ದು ನಮಗೆ ಬಂದಿಲ್ಲ ಎಂದು ಹೇಳಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ವಿರುದ್ಧ ಹೋರಾಡಬೇಕು ಎಂಬ ಕಾರಣಕ್ಕಾಗಿ ಇಂದು ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.

ಈ ಸಂದರ್ಭ ಬಿಜೆಪಿ ನಗರ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.