ಸೋಮವಾರಪೇಟೆ, ಸೆ. 30: ನಿನ್ನೆ ದಿನ ನಿಧನರಾದ ಪಟ್ಟಣದ ಉದ್ಯಮಿ ಬಿ.ಎಸ್. ಸದಾನಂದ್ ಅವರ ಗೌರವಾರ್ಥ ಇಂದು ಅಪರಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ, ಸಹಾಯಕ ರಾಜ್ಯಪಾಲ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಮಾಜೀ ನಿರ್ದೇಶಕ, ಟ್ರಸ್ಟ್ನ ಹಾಲಿ ನಿರ್ದೇಶಕ, ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸದಾನಂದ್ ಅವರು, ವರ್ತಕರ ಸಂಘದಲ್ಲೂ ಸಕ್ರಿಯರಾಗಿದ್ದರು.
ಇದರೊಂದಿಗೆ ಯಶಸ್ವಿ ಉದ್ಯಮಿಯೂ ಆಗಿದ್ದ ಅವರು, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆ ಪಟ್ಟಣದಲ್ಲಿ ವರ್ತಕರ ಸಂಘದ ವತಿಯಿಂದ ಗೌರವಾರ್ಥವಾಗಿ ಅಂಗಡಿ ಮುಂಗಟ್ಟುಗಳನ್ನು 2 ಗಂಟೆಗಳ ಕಾಲ ಬಂದ್ ಮಾಡಿ ಸಂತಾಪ ಸೂಚಿಸಲಾಯಿತು.
ಜಿಲ್ಲಾ ಚೇಂಬರ್ ಬ್ಯಾಂಕ್
ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದ ಬಿ.ಎಸ್. ಸದಾನಂದ ನಿಧನರಾದ ಹಿನ್ನೆಲೆ ಇಂದು ನಡೆಯಬೇಕಾಗಿದ್ದ ಸಂಘದ ಆಡಳಿತ ಮಂಡಳಿ ಸಭೆಯನ್ನು ಶ್ರದ್ಧಾಂಜಲಿ ಸಭೆ ಎಂದು ಪರಿಗಣಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಸಭೆಯನ್ನು ಬರಕಾಸ್ತು ಮಾಡಲಾಯಿತು.
ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್, ಉಪಾಧ್ಯಕ್ಷ ಬಿ. ರಾಮಕೃಷ್ಣಯ್ಯ ಹಾಗೂ ನಿರ್ದೇಶಕರುಗಳಾದ ಸವಿತಾ ರೈ, ಮುನೀರ್ ಅಹಮ್ಮದ್ ಇವರುಗಳು ಮೃತರ ಸೇವೆಯನ್ನು ಸ್ಮರಿಸಿದರು.