ಸೋಮವಾರಪೇಟೆ, ಅ. 1: ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸೂರಿಗಾಗಿ ಸಮರ ಜಾಥಾವು ಜಿಲ್ಲೆಯಲ್ಲಿ ತಾ. 2 ರಿಂದ(ಇಂದಿನಿಂದ) ಆರಂಭಗೊಳ್ಳಲಿದ್ದು, ಇದರ ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ. ವತಿಯಿಂದ ಸರಣಿ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಗಾಂಧಿ ಪ್ರತಿಮೆ ಎದುರು ಜಾಥಾಕ್ಕೆ ಚಾಲನೆ ನೀಡಲಾಗುವದು. ಸಿಪಿಐ ರಾಜ್ಯಾಧ್ಯಕ್ಷರಾದ ಸ್ವಾತಿ ಸುಂದರೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕೆ. ಗುಣಶೇಖರ್, ಜಿಲ್ಲಾ ಕಾರ್ಯದರ್ಶಿ ಸುನಿಲ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಂತರ ಬೇಳೂರು, ಐಗೂರು, ಕಿರಗಂದೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ, ಬಡವರಿಗೆ ನಿವೇಶನ ಒದಗಿಸುವಂತೆ ಮನವಿ ಪತ್ರ ಸಲ್ಲಿಸಲಾಗುವದು. ತಾ. 3 ರಂದು ಮಾದಾಪುರ, ಕಂಬಿಬಾಣೆ, ತಾ. 5ರಂದು ಸುಂಟಿಕೊಪ್ಪ, ಕೆದಕಲ್ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಸೋಮಪ್ಪ ತಿಳಿಸಿದ್ದಾರೆ.