ಮಡಿಕೇರಿ, ಆ. 28: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಳ್ಳ ಮಾಲೂರು ಅರಣ್ಯದಲ್ಲಿ ಹುಲಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.ಈಗಾಗಲೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಂತೋಷ್ ಎಂಬಾತ ಬಂಧಿತನಾಗಿದ್ದು, ತಲೆಮರೆಸಿಕೊಂಡಿರುವ ಇತರ ಮೂವರ ಬಂಧನಕ್ಕೆ ಶೋಧ ನಡೆಯುತ್ತಿದೆ. ಇದರೊಂದಿಗೆ ಹಾಲಿ ಹತ್ಯೆ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಇನ್ನಷ್ಟು ಶೋಧ ನಡೆಸಿದಾಗ ಹುಲಿಯ ದೇಹದ ಇತರ ಭಾಗಗಳು ಹಾಗೂ ಕಾಲಿನ ಉಗುರು ಬಿಡಿಸಿ ಅನತಿ ದೂರದಲ್ಲಿ ಎಸೆಯಲಾಗಿದ್ದ ಕಾಲಿನ ಭಾಗಗಳು ಪತ್ತೆಯಾಗಿವೆ.ಇದರೊಂದಿಗೆ ನಾಪತ್ತೆಯಾಗಿರುವ ಆರೋಪಿ ರಂಜಿ ಎಂಬಾತನ ಮನೆಯಲ್ಲಿ ಸಂಗ್ರಹವಿದ್ದ ಗನ್ ಪೌಡರ್, ಚಿಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಾಗರ ಹೊಳೆಯ ನಿರ್ದೇಶಕರಾದ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.