ವೀರಾಜಪೇಟೆ, ಆ. 26: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿಲ್ಲ. ಮಕ್ಕಳಿಗೆ ನಿರಂತರ ಕಲಿಕೆಯೂ ಲಭ್ಯವಾಗುತ್ತಿಲ್ಲ. ಶಾಲೆಗಳು ಆರಂಭವಾಗುವವರೆಗೂ ಮಕ್ಕಳ ನಿರಂತರ ಕಲಿಕೆಗೆ ತೊಡಗಿಸಿಕೊಳ್ಳುವಂತೆ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗವಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದೆ. ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ಜಾರಿಯಾಗಿದೆ.

ಖಾಸಗಿ ಅನುದಾನ ರಹಿತ ಶಾಲೆಗಳು ಆನ್‍ಲೈನ್ ತರಗತಿ, ವಾಟ್ಸಪ್ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಆದರೆ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಮಕ್ಕಳಿರುವ ಸ್ಥಳಕ್ಕೆ ಶಿಕ್ಷಕರು ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ. ವಿಶೇಷವಾಗಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಪಾಠಗಳು ಆರಂಭವಾಗಿವೆ. ನಾಗರಿಕರು ಈ ವ್ಯವಸ್ಥೆಯನ್ನು ವಠಾರ ಶಾಲೆ ಎಂದು ಕರೆಯುತ್ತಿದ್ದಾರೆ. ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದೇ ಮಕ್ಕಳಿಗೆ ತರಗತಿ ನಡೆಸುವುದು ಈ ಕಾರ್ಯಕ್ರಮದ ವಿಶೇಷ.

ನಗರ, ಪಟ್ಟಣ, ಗ್ರಾಮಗಳಲ್ಲಿ ಮಾರ್ಗದರ್ಶಿ ಶಿಕ್ಷಕರು ತಮಗೆ ನಿಯೋಜಿತ ಪ್ರದೇಶದ ವಿದ್ಯಾರ್ಥಿಗಳನ್ನು ಮನೆ ಸಮೀಪವೇ ಇರುವ ದೇವಾಲಯಗಳ ಆವರಣ, ಸಮುದಾಯ ಭವನ, ಅಂಗನವಾಡಿ, ಧಾರ್ಮಿಕ ಕ್ಷೇತ್ರಗಳು, ಮರದ ನೆರಳು, ಮನೆಯಂಗಳ ಹೀಗೆ ಸ್ಥಳಗಳನ್ನು ಗುರುತಿಸಿದ್ದಾರೆ. ಇಲ್ಲಿಗೆ ಬರುವ ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಂಡು ಕೂರಬೇಕಾಗಿದೆ. ಶಿಕ್ಷಕರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಕೊಡುತ್ತಾರೆ. ಅಭ್ಯಾಸ ಹಾಳೆಗಳನ್ನು, ರೂಪಣಾತ್ಮಕ ಪ್ರಶ್ನೆ ಪತ್ರಗಳನ್ನು ವಿತರಿಸುತ್ತಿದ್ದಾರೆ. ಮಕ್ಕಳು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾವು ಬರೆದಿದ್ದನ್ನು ಶಿಕ್ಷಕರಿಗೆ ಒಪ್ಪಿಸುತ್ತಾರೆ. ಶಿಕ್ಷಕರು ಇವುಗಳ ಮೌಲ್ಯಮಾಪನ ಮಾಡುವರು. 1 ರಿಂದ 5ನೇ ತರಗತಿಯ ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರು ಎಲ್ಲಾ ವಿಷಯಗಳನ್ನು ನಿರ್ವಹಿಸುತ್ತಿದ್ದಾರೆ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ವಿಷಯ ಬೋಧಕರು ನಿರ್ವಹಿಸುತ್ತಿದ್ದಾರೆ.

ಶಾಲಾವಾರು ಜನವಸತಿ ಪ್ರದೇಶಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಗುರುತಿಸಿಕೊಳ್ಳಲಾಗಿದ್ದು 20 ರಿಂದ 25 ವಿದ್ಯಾರ್ಥಿಗಳಿಗೆ ಒಬ್ಬರು ಮಾರ್ಗದರ್ಶಿ ಶಿಕ್ಷಕರನ್ನು ಗುರುತಿಸಿಕೊಳ್ಳಲಾಗುತ್ತಿದೆ.

ಇಂಟರ್‍ನೆಟ್ ರಹಿತ ಮೊಬೈಲ್ ಫೋನ್ ಹೊಂದಿರುವ ವಿದ್ಯಾರ್ಥಿಗಳನ್ನು ವಿಧ 2ರ ಗುಂಪಿನಲ್ಲಿ ಗುರುತಿಸಲಾಗಿದ್ದು, ವಿದ್ಯಾರ್ಥಿಗಳ ಪೋಷಕರು ಕೆಲಸಕ್ಕೆ ಹೋಗುವ ಸಮಯವನ್ನು ಹೊರತುಪಡಿಸಿ ಬೆಳಿಗ್ಗೆ 9ರ ವರೆಗೆ ಸಂಜೆ 6ರ ನಂತರ ಎಸ್.ಎಂ.ಎಸ್. ಮೂಲಕ ಆ ದಿನ ಮಾಡಬೇಕಾದ ಚಟುವಟಿಕೆಗಳು, ಅದಕ್ಕೆ ಪೂರಕವಾದ ಅಭ್ಯಾಸಗಳನ್ನು ಮಾಡಲು ಪೋಷಕರ ಮೂಲಕ ಮಕ್ಕಳಿಗೆ ತಲುಪಿಸಿ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ.

ಇಂಟರ್‍ನೆಟ್ ಸಹಿತ ಕಂಪ್ಯೂಟರ್, ಟ್ಯಾಬ್, ಸ್ಮಾರ್ಟ್‍ಫೋನ್ ಹೊಂದಿರುವ ವಿದ್ಯಾರ್ಥಿಗಳನ್ನು ವಿಧ 3ರಲ್ಲಿ ಗುಂಪು ಮಾಡಲಾಗಿದ್ದು, ಶಿಕ್ಷಕರು ವೀಡಿಯೋ ಪಾಠಗಳನ್ನು, ಬೋಧನಾ ಅಂಶಗಳನ್ನು ವಾಟ್ಸಪ್ ಮೂಲಕ ರವಾನಿಸುವುದು, ವಿವಿಧ ಆಪ್‍ಗಳ ಮೂಲಕ ವೀಡಿಯೋ ಕಾನ್ಫರೆನ್ಸ್ ಬೋಧನೆಯನ್ನು ಕೂಡ ಮಾಡುತ್ತಿದ್ದಾರೆ.

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ದಿನನಿತ್ಯ ಪೂರೈಕೆಯಾಗುತ್ತಿದ್ದ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪುಡಿ, ಬಿಸಿಯೂಟ ಕಾರ್ಯಕ್ರಮದಡಿ ದಿನಸಿ ಪದಾರ್ಥಗಳು ಮಕ್ಕಳ ಪೆÇೀಷಕರಿಗೆ ತಲುಪುತ್ತಿದೆ.

ಶಿಕ್ಷಕರು ತಮ್ಮ ಮತ್ತು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಾಸ್ಕ್ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದೊಂದಿಗೆ ವಿಶೇಷ ಗಮನಹರಿಸುವುದರ ಮೂಲಕ ವಿದ್ಯಾಗಮ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಬೇಕು, ತಾಲೂಕಿನ ಶಿಕ್ಷಕರು ಸ್ವಇಚ್ಚೆ, ಸೇವಾ ಮನೋಭಾವನೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳ ನಿರಂತರ ಕಲಿಕೆಗಾಗಿ ಪೂರಕವಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಯಾಗಿದೆ. ಮಕ್ಕಳ ಆಸಕ್ತಿ, ಕಲಿಕೆ ಅಗತ್ಯವನ್ನು ಗಮನಿಸಿ ಶಿಕ್ಷಕರು ಚಟುವಟಿಕೆಗಳನ್ನು ಕೊಡುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದಲೇ ಅಗತ್ಯ ಮಾರ್ಗಸೂಚಿಗಳ ಪ್ರಕಾರ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ತಿಳಿಸಿದ್ದಾರೆ.