ಮಡಿಕೇರಿ, ಆ.10: ಇತ್ತೀಚೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಶ್ರೀ ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕೈಂಕರ್ಯಗಳಿಗೆ ಅಡಚಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಪುನರ್ ಆರಂಭಿಸುವ ಬಗ್ಗೆ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.
ತಲಕಾವೇರಿ ಕ್ಷೇತ್ರವು ಕೊಡಗಿನ ಪುಣ್ಯಕ್ಷೇತ್ರವಾಗಿದ್ದು, ಕ್ಷೇತ್ರದ ಭಕ್ತಾಧಿಗಳ ಭಾವನೆಗೆ ಧಕ್ಕೆಯಾಗದಂತೆ ತಂತ್ರಿಯವರ ಸಲಹೆ ಮಾರ್ಗದರ್ಶನ ದಂತೆ ತಲಕಾವೇರಿ ದೇವಾಲಯದ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಕೈಗೊಂಡು ದೈನಂದಿನ ಪೂಜಾ ಕಾರ್ಯ ಹಾಗೂ ವಿಧಿ ವಿಧಾನಗಳನ್ನು ಕೈಗೊಳ್ಳಲು ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಯಿತು. ‘ತಲಕಾವೇರಿಗೆ ತೆರಳಲು ರಸ್ತೆಯಾದ ನಂತರ ಭಾಗಮಂಡಲದ ಅರ್ಚಕರಿಂದ ಪೂಜೆ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.’
ಸಭೆಯ ಆರಂಭದಲ್ಲಿ ಭಾಗಮಂಡಲ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ ತಲಕಾವೇರಿ ದೇವಾಲಯ ಬಳಿ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ತಂತ್ರಿಗಳ ಸಲಹೆಯಂತೆ ಪೂಜಾ ಕಾರ್ಯ ಆರಂಭಿಸಬೇಕಿದೆ ಎಂದು ಕೋರಿದರು.
(ಮೊದಲ ಪುಟದಿಂದ) ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ ದೇವಾಲಯದಲ್ಲಿ ಇದುವರೆಗೆ ಪೂಜಾ ಕಾರ್ಯಗಳು ನಿಂತಿರಲಿಲ್ಲ. ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ರುದ್ರಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜಾ ಕಾರ್ಯ ಕೈಗೊಂಡು ತಂತ್ರಿಗಳ ಮಾರ್ಗದರ್ಶನದಂತೆ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಪೂಜಾ ಕಾರ್ಯ ಪುನರ್ ಆರಂಭಿಸಬೇಕಿದೆ ಎಂದು ಸಲಹೆ ಮಾಡಿದರು.
ಮತ್ತೊಬ್ಬ ಸಮಿತಿ ಸದಸ್ಯ ಸಣ್ಣುವಂಡ ಡಾ.ಕಾವೇರಪ್ಪ ಮಾತನಾಡಿ ತಲಕಾವೇರಿಯಲ್ಲಿ ಭಗ್ನಗೊಂಡ ಅಗಸ್ತ್ಯೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಆ ವಿಗ್ರಹ ವಿಸರ್ಜನೆಯಾಗದೆ ದೇವಸ್ಥಾನ ದಲ್ಲಿಯೇ ಉಳಿದಿದೆ. ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ವಿಸರ್ಜಿಸುವ ಕಾರ್ಯ ಆಗಬೇಕು ಎಂದರು.
ಅಲ್ಲದೆ ಭಾಗಮಂಡಲ ಪಟ್ಟಣದ ಒಳಚರಂಡಿ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಈ ಕಾರ್ಯ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಗೂ ಮೊದಲೇ ಪೂರ್ಣಗೊಳಿಸಬೇಕು ಎಂದು ಕೋರಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಸಣ್ಣುವಂಡ ಡಾ.ಕಾವೇರಪ್ಪ ಸದ್ಯ ಪ್ರಗತಿಯಲ್ಲಿರುವ ಪಿಂಡ ಪ್ರಧಾನ ಕಾಮಗಾರಿ ಮುಂಬರುವ ತೀರ್ಥೋದ್ಭವದ ಒಳಗಾಗಿ ಪೂರ್ಣಗೊಳಿಸಿ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಅರ್ಚಕ ರಾಜೇಶ್ ಆಚಾರ್ ಮಾತನಾಡಿ, ತಲಕಾವೇರಿಯಲ್ಲಿ ರುದ್ರಾಭಿಷೇಕ, ನೈವೇದ್ಯ ಪೂಜಾ ಕಾರ್ಯ ಮಾಡಬೇಕಿದೆ. ನಿತ್ಯ ಪೂಜೆ ಜೊತೆಗೆ ಎಷ್ಟು ದಿನ ಪೂಜೆ ನಡೆದಿಲ್ಲ, ಅದೂ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಬೇಕಿದೆ ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ತಲಕಾವೇರಿ ಕ್ಷೇತ್ರಕ್ಕೆ ತೆರಳಲು ರಸ್ತೆ ಸರಿಪಡಿಸುವ ತನಕ ಅಭ್ಯಂತರವಿಲ್ಲ ಎಂದು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪೂಜೆ ಸ್ಥಗಿತಗೊಳಿಸ ಬಾರದು. ಸಂಪ್ರದಾಯ ದಂತೆ ಪೂಜಾ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.
ತಲಕಾವೇರಿ ದೇವಾಲಯ ದಲ್ಲಿರುವ ವಿಗ್ರಹಕ್ಕೆ ಸಂಬಂಧಿಸಿದಂತೆ ತಲೆಕೆಡಿಸಿಕೊಳ್ಳುವುದು ಬೇಡ. ಭಾಗಮಂಡಲ ದೇವಾಲಯದ ಅರ್ಚಕರಿಂದ ಪೂಜಾ ಕಾರ್ಯ ಮುಂದುವರಿಸುವಂತೆ ಕೆ.ಜಿ. ಬೋಪಯ್ಯ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ತಮ್ಮಯ್ಯ ಅವರು ವಿಗ್ರಹ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಸದ್ಯ ಪೂಜಾ ಕಾರ್ಯ ಆರಂಭವಾದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಂತ್ರಿಗಳ ಸಲಹೆ, ಮಾರ್ಗದರ್ಶನದಂತೆ ಭಗಂಡೇಶ್ವರ ದೇವಾಲಯದ ಅರ್ಚಕರಿಂದ ಪೂಜೆ ಮುಂದುವರಿಸಲು ಸಲಹೆ ಮಾಡಿದರು.
ಇದಕ್ಕೆ ನಾರಾಯಣಾಚಾರ್ ಕುಟುಂಬದ ಅರ್ಚಕರು ಸಹಮತ ವ್ಯಕ್ತಪಡಿಸಿದರು. ನಿಷ್ಕಲ್ಮಶವಾಗಿ, ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕು. ಪೂಜೆ ಸಂದರ್ಭದಲ್ಲಿ ಸಣ್ಣ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು. ಭಾಗಮಂಡಲ-ತಲಕಾವೇರಿ ದೇವಾಲಯ ಕಾರ್ಯನಿರ್ವ ಹಣಾಧಿಕಾರಿ ಜಗದೀಶ್ ಇತರರು ಇದ್ದರು.
ಭಾಗಮಂಡಲದ ಹೊಟೇಲ್ ಮಯೂರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ್ರಾ, ಭಾಗಮಂಡಲ ಮತ್ತು ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಸಮಿತಿ ಸದಸ್ಯರು ಹಾಗೂ ತಕ್ಕರಾದ ಕೋಡಿ ಮೋಟಯ್ಯ, ಸದಸ್ಯರಾದ ಸಣ್ಣುವಂಡ ಡಾ.ಕಾವೇರಪ್ಪ, ಉದಿಯಂಡ ಸುಭಾಷ್, ನಿಡ್ಯಮಲೆ ಮೀನಾಕ್ಷಿ ಸುರೇಶ್, ತಲಕಾವೇರಿ ದೇವಾಲಯದ ಅರ್ಚಕ ಕುಟುಂಬದವರು ಇತರರು ಪಾಲ್ಗೊಂಡಿದ್ದರು.