ಕುಶಾಲನಗರ, ಆ. 8: ಪ್ರವಾಹ ಉಂಟಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೂಡಲೇ ವಿಶೇಷ ತಜ್ಞರ ಸಮಿತಿಯೊಂದನ್ನು ರಚಿಸುವ ಭರವಸೆಯನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ನೀಡಿದ್ದಾರೆ. ಕುಶಾಲನಗರದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಸತತವಾಗಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಬಗ್ಗೆ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಪ್ರಮುಖರು ಉಸ್ತುವಾರಿ ಸಚಿವರಿಗೆ ಮನವಿ ನೀಡಿದ ಸಂದರ್ಭ ಮಾತನಾಡಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತಜ್ಞರ ಸಮಿತಿ ನೇಮಿಸಲು ಕ್ರಮಕೈಗೊಳ್ಳಲಾಗುವುದು. ಆ ಮೂಲಕ ಕಾವೇರಿ ನದಿಯ ಸಮಗ್ರ ಮಾಹಿತಿ ಕಲೆಹಾಕಿ ನದಿ ನಿರ್ವಹಣೆ ಮತ್ತು ಪ್ರವಾಹ ತಡೆಯಲು ಅವಶ್ಯವಿರುವ ಯೋಜನೆ ಸಿದ್ಧಪಡಿಸಲಾಗುವುದು, ಒಂದು ತಿಂಗಳೊಳಗೆ ಈ ಕೆಲಸ ನಡೆಸಲಾಗುವುದು ಎಂದರು. ಕಳೆದ ಮೂರು ವರ್ಷಗಳಿಂದ ಹಾರಂಗಿ ಮತ್ತು ಕಾವೇರಿ ನದಿ ಉಕ್ಕಿ ಹರಿದು ತಗ್ಗು ಪ್ರದೇಶಗಳ ಬಡಾವಣೆಗಳ ಜನರು ಸಮಸ್ಯೆಗೆ ಒಳಗಾಗುವುದರೊಂದಿಗೆ ಜನಜೀವನ ಏರುಪೇರಾಗುತ್ತಿದೆ. ಮನೆಗಳು ಜಲಾವೃತ ಗೊಳ್ಳುವುದ ರೊಂದಿಗೆ ನಾಗರಿಕರ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಅಲ್ಲದೆ ಬಡಾವಣೆಗಳ ಮನೆಗಳು ಮುಳುಗುತ್ತಿರುವ ಕಾರಣ ಕಟ್ಟಡಗಳು ಕುಸಿದು ಮುಂದಿನ ದಿನಗಳಲ್ಲಿ ಭಾರೀ ಜೀವಹಾನಿಗಳು ಉಂಟಾಗುವ ಸಾದ್ಯತೆಯಿದೆ. ಸರಕಾರದ ಮೂಲಕ ತಜ್ಞರ ಸಮಿತಿ ವರದಿ ಆಧಾರಿಸಿ ಶಾಶ್ವತ ಕ್ರಮಕೈಗೊಳ್ಳಲು ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಮನವಿ ಪತ್ರದಲ್ಲಿ ಕೋರಿದ್ದಾರೆ. ಸಂತ್ರಸ್ತರ ವೇದಿಕೆಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷ ತೋರೆರ ಉದಯಕುಮಾರ್, ಕೊಡಗನ ಹರ್ಷ, ವಿನಯ್ ಕಾರ್ಯಪ್ಪ ಇದ್ದರು.

ಕುಶಾಲನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊಂದಿಗೆ ವಿಶೇಷ ಪ್ಯಾಕೆಜ್ ನೀಡಲು ಕ್ರಮಕೈಗೊಳ್ಳುವಂತೆ ಉಸ್ತುವಾರಿ ಸಚಿವರಿಗೆ ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರಾದ ಪ್ರಮೋದ್‍ಮುತ್ತಪ್ಪ ಮತ್ತು ಅಮೃತ್‍ರಾಜ್ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.