ಸುಂಟಿಕೊಪ್ಪ, ಆ.3: ಪೊಲೀಸ್ ವೃತ್ತಿಯಲ್ಲಿ ಎಷ್ಟು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿದ್ದರೂ ಕಪ್ಪು ಚುಕ್ಕಿ ಹೆಗಲ ಮೇಲೆ ಹೊತ್ತುಕೊಂಡು ಬರುತ್ತದೆ. 37 ವರ್ಷಗಳ ಸುದೀರ್ಘ ಅವಧಿಯಲ್ಲಿ ಬಿ.ತಿಮ್ಮಪ್ಪ ಸೇವೆ ಸಲ್ಲಿಸಿದ್ದಾರೆ ಎಂದು ಡಿವೈಎಸ್‍ಪಿ ಎಂ.ಶೈಲೇಂದ್ರ ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪ ವಯೋನಿವೃತ್ತಿ ಹೊಂದಿದ್ದು ಅವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸರು ಎಷ್ಟೇ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೂ, ಸಾರ್ವಜನಿಕರು ಸಂಶಯ ದೃಷ್ಟಿಯಿಂದ ನೋಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಜವಾಬ್ಧಾರಿ ಹೆಚ್ಚಿದೆ. ಸ್ವಲ್ಪ ಎಡವಿದರೂ ಆರೋಪ ಕಟ್ಟಿಟ್ಟ ಬುತ್ತಿಯಾಗುತ್ತದೆ. ಬೇರೆ ಇಲಾಖೆಗಿಂತ ಪೊಲೀಸ್ ಸೇವೆ ವಿಭಿನ್ನವಾದದ್ದು. ಸುಂಟಿಕೊಪ್ಪ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದ್ದರೂ ಉತ್ತಮವಾಗಿ ತಿಮ್ಮಪ್ಪ ಅವರು ಕರ್ತವ್ಯ ನಿರ್ವಹಿಸಿದರು ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಮಾತನಾಡಿ ತಿಮ್ಮಪ್ಪ ಅವರು ತಮ್ಮ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕಿಗೆ ಒಳಗಾಗದೆ ಕರ್ತವ್ಯವನ್ನು ನಿರ್ವಹಿಸಿ ವಯೋನಿವೃತ್ತಿ ಹೊಂದುತ್ತಿರುವುದು ಬಹುದೊಡ್ಡ ಸಾಧನೆಯೇ ಸರಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ತಿಮ್ಮಪ್ಪ ಅವರು ಕೊಡಗಿಗೆ ಪ್ರಥಮವಾಗಿ ಬಂದಾಗ ಅತಿವೃಷ್ಠಿಯಿಂದ ಜಲಪ್ರಳಯ, ಭೂಕುಸಿತ ಸಂಭವಿಸಿತ್ತು. ಜನ ಜೀವನ ಅಸ್ತವ್ಯಸ್ತವಾಗಿತ್ತು. ಸಾರ್ವಜನಿಕರು, ಸಹ ಸಿಬ್ಬಂದಿಗಳು, ಮೇಲಾಧಿಕಾರಿಗಳ ನಿರ್ದೇಶನದಂತೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಮೇಲಾಧಿಕಾರಿಗಳು, ಸಹ ಸಿಬ್ಬಂದಿಗಳು ಹಾಗೂ ಊರಿನ ಜನತೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಅವರಿಗೂ ಧನ್ಯವಾದ ಆರ್ಪಿಸುತ್ತೇನೆ ಎಂದರು.

ಈ ಸಂದರ್ಭ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಡೇಗೌಡ, ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್, ಪ್ರಭಾರ ಎಸ್.ಐ ಕಾವೇರಪ್ಪ, ಎ.ಎಸ್.ಐಗಳಾದ ಶಿವಪ್ಪ, ಶ್ರೀನಿವಾಸ್ ಮುಖ್ಯಪೇದೆಗಳು, ಪೇದೆಗಳು ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಇದ್ದರು.

ಡಿ.ಎಸ್.ಎಸ್. ಗೌರವ

ಸುಂಟಿಕೊಪ್ಪ ಠಾಣಾಧಿಕಾರಿ ಯಾಗಿ ನಿವೃತ್ತರಾದ ಬಿ.ತಿಮ್ಮಪ್ಪ ಅವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭ ಸುಂಟಿಕೊಪ್ಪ ಜೆಸಿಐ ಸಂಸ್ಥೆ ಅಧ್ಯಕ್ಷ ಹಾಗೂ ಜನವಿಕಾಸ ವೃದ್ಧಾಶ್ರಮ ಮೇಲ್ವಿಚಾರಕ ರಮೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಬಿ.ಡಿ.ರಾಜು ರೈ, ಸ್ತ್ರೀಶಕ್ತಿ ಸಂಘಗಳಾದ ಭೂಮಿಕ, ಜನನಿ, ಸೂರ್ಯ ಪ್ರತಿನಿಧಿಗಳಾದ ಮುನಿಯಮ್ಮ, ಸೆಲ್ವಿ, ಸ್ವಸ್ಥ ಸಂಸ್ಥೆಯ ಸಿಬಿಆರ್ ಸಂಯೋಜಕರಾದ ಮುರುಗೇಶ್, ಜೆಸಿಐ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ. ತಿಮ್ಮಪ್ಪ, ಸವಿತಾ ಸಮಾಜದ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.