ಮಡಿಕೇರಿ, ಆ. 1: ಕಡು ಬಡತನದ ನಡುವೆ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಅಂಕ ಗಳಿಸಿರುವ ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ವಿದ್ಯಾರ್ಥಿನಿ ಟಿ.ಕೆ. ಭವಾನಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಶುಭ ಹಾರೈಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯೊಂದಿಗೆ ಮಾತುಕತೆ ನಡೆಸಿದರು. ಕಷ್ಟಪಟ್ಟು ಓದಿದ್ದರ ಪ್ರತಿಫಲವಾಗಿ ಉತ್ತಮ ಅಂಕ ಗಳಿಸಿದ್ದೀರಿ. ಪತ್ರಿಕೆಗಳ ಮೂಲಕ ಮಾಹಿತಿ ತಿಳಿದುಬಂತು. ಉನ್ನತ ವಿದ್ಯಾಭ್ಯಾಸ ಮಾಡಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿ ಎಂದು ವಿದ್ಯಾರ್ಥಿನಿಗೆ ಸಲಹೆ ಮಾಡಿದರು.

ಇದೇ ವೇಳೆ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿದ್ಯಾರ್ಥಿನಿ ಟಿ.ಕೆ.ಭವಾನಿ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂ. ಮತ್ತು ಒಂದು ಸೋಲಾರ್ ಲ್ಯಾಂಪ್ ಕೊಡುಗೆಯಾಗಿ ನೀಡಲಾಯಿತು.

ಇದೇ ಸಂದರ್ಭ ಜಿಲ್ಲಾಧಿಕಾರಿ ಅವರಿಗೆ ವಿದ್ಯಾರ್ಥಿನಿ ಮನವಿ ಪತ್ರ ಸಲ್ಲಿಸಿ, ತಮಗೆ ಮನೆ, ಶೌಚಾಲಯ ಇನ್ನಿತರ ಮೂಲ ಸೌಲಭ್ಯ ಕಲ್ಪಿಸುವಂತೆ ಕೋರಿದರು.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು. ಆಹಾರ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಭವಾನಿ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ಗ್ಯಾಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ವಹಿಸಲು ನಿರ್ದೇಶನ ನೀಡಿದರು. ವಿದ್ಯಾರ್ಥಿನಿಗೆ ಮನೆ ನಿರ್ಮಾಣ ಮಾಡಲು ಅಗತ್ಯ ದಾಖಾಲಾತಿಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಪಿ.ಎಂ. ಸಂದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ, ಯೋಜನಾ ನಿರ್ದೇಶಕ ಎಂ.ಎ. ಪೆÇನ್ನಪ್ಪ, ವಲಯ ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ವಾಮನ ಮೂರ್ತಿ ಇತರರು ಇದ್ದರು.