ಮಡಿಕೇರಿ, ಜು. 31: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದ ನೈಜ ಸಂತ್ರಸ್ತರಿಗೆ ಮನೆ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವತ್ತೊಕ್ಲು ಗ್ರಾಮದ ಖಾಯಂ ನಿವಾಸಿಗಳಾದ ಎಂ.ಕೆ. ತಿಮ್ಮಯ್ಯ, ಎಂ.ಜಿ. ಪೊನ್ನಪ್ಪ, ಎಂ.ಬಿ. ರೇಷ್ಮ, ಎಂ.ಎ. ಕುಟ್ಟಪ್ಪ, ಎಂ.ಕೆ. ಗಂಗಮ್ಮ, ಎಂ.ಎ. ಚಂಗಪ್ಪ, ಎಂ.ಡಿ. ಕಾರ್ಯಪ್ಪ ಎಂಬವರುಗಳ ಮನೆಗಳಿಗೆ 2018ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾಗಿತ್ತು.

ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗÀ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿದ್ದರು. ಅಲ್ಲದೇ ನಿವೇಶನ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇರಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಂದಿನ ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ನಂತರ ರಾಜಕೀಯದ ಕಾಣದ ಕೈಗಳು ತಡೆಯೊಡ್ಡಿವೆ ಎಂದು ಆರೋಪಿಸಿದರು. ಪ್ರಸ್ತುತ ಮನೆ ಹಂಚಿಕೆ ಬಗ್ಗೆ ಸಂಶಯ ಮೂಡಿದ್ದು, ಸಂತ್ರಸ್ತರ ಪಟ್ಟಿಯನ್ನು ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ವೇದಿಕೆಯ ಕೆ.ಕೆ. ಜಯಂತಿ, ಮಡಿಕೇರಿ ತಾಲೂಕು ಅಧ್ಯಕ್ಷೆ ಎಂ. ಶಾರದ, ಗ್ರಾಮಸ್ಥರಾದ ಎಂ.ಟಿ. ಚಿಣ್ಣಪ್ಪ ಹಾಗೂ ವನಿತಾ ಕಾರ್ಯಪ್ಪ ಉಪಸ್ಥಿತರಿದ್ದರು.