ಮಡಿಕೇರಿ, ಜು. 28: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧಕಾಜ್ಞೆ ಜಾರಿಗೊಳಿಸ ಲಾಗಿತ್ತು. ಇದೀಗ ಸರಕಾರದ ನಿರ್ದೇಶನದಂತೆ ನಿರ್ಬಂಧಕಾಜ್ಞೆಯನ್ನು ಸಡಿಲಿಸಲಾಗಿದ್ದು, ಕೆಲವೊಂದು ಮಾರ್ಪಾಡು ಹಾಗೂ ಸೂಚನೆಗಳೊಂದಿಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಹೊಂದಿ ಕೊಂಡಿರುವ ನೆರೆ ರಾಜ್ಯ ಮುಖಾಂತರ ಕೊಡಗು ಜಿಲ್ಲೆಗೆ ಟೂರಿಸ್ಟ್ ಮತ್ತು ಖಾಸಗಿ ವಾಹನಗಳಲ್ಲಿ ಪ್ರವಾಸ, ಪಿಕ್‍ನಿಕ್ ಮುಂತಾದ ಉದ್ದೇಶದಿಂದ ಆಗಮಿಸುವುದು ಸಕಾರಣವಿಲ್ಲದೆ ಕೊಡಗು ಜಿಲ್ಲೆಗೆ ಭೇಟಿ ನೀಡುವುದು ಮತ್ತು ತಂಗುವುದು, ಹೊರ ರಾಜ್ಯ ಮತ್ತು ಹೊರ ದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿಗೃಹ ಮತ್ತಿತರ ವಸತಿ ಸೌಕರ್ಯ ನೀಡದಂತೆ ನಿರ್ಬಂಧ ವಿಧಿಸಲಾಗಿತ್ತು.ಪ್ರಸ್ತುತ ರಾಜ್ಯದಾದ್ಯಂತ ನಿಯಮಾನುಸಾರ ಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಮುಖ್ಯ ಮಂತ್ರಿಗಳು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯುಲೇಷನ್ 2020 ನಿಯಮ 12 ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ಕಲಂ 24(ಎ) (ಬಿ) 30(2) ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧಕಾಜ್ಞೆ ಸಡಿಲಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿಂದಿನ ನಿರ್ಬಂಧಕಾಜ್ಞೆಯನ್ನು ಸಡಿಲಿಸಿ, ವಿದೇಶ ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ನೆರೆಯ ಜಿಲ್ಲೆಗಳಿಂದಲೂ ಆಗಮಿಸುವವರಿಗೂ ಅವಕಾಶ ಕಲ್ಪಿಸಲಾಗಿದ್ದು, ಆದೇಶದ ಕೆಲವೊಂದು ಮಾರ್ಪಾಡು ಗಳೊಂದಿಗೆ ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಆದೇಶ, ಷರತ್ತು ಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ.

ಸಂಪರ್ಕ ತಡೆ: ವಿದೇಶ ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಸಂಪರ್ಕ ತಡೆಯಲ್ಲಿ ಇರಬೇಕಾಗಿರುತ್ತದೆ. ಇವರುಗಳು ಯಾವುದೇ ಕಾರಣಕ್ಕೂ ಸಂಪರ್ಕ ತಡೆಯಿಂದ ಹೊರ ಬರುವುದು ಅಥವಾ ಸಾರ್ವಜನಿಕವಾಗಿ ತಿರುಗಾಡುವುದು ಮಾಡಬಾರದು. ಕಡ್ಡಾಯವಾಗಿ ಸರ್ಕಾರದ ಆರೋಗ್ಯ ಇಲಾಖೆ ಹೊರಡಿಸಿರುವ ಕಾರ್ಯವಿಧಾನವನ್ನು ಪಾಲಿಸುವಂತೆ ಸೂಚಿಸಲಾಗಿದೆ. ನೆರೆಯ ಜಿಲ್ಲೆಗಳಿಂದ ಆಗಮಿಸುವ ಅತಿಥಿಗಳು ಅವರು ತಂಗುವ ಹೊಟೇಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹ ಇತ್ಯಾದಿಗಳಿಗೆ ನೇರವಾಗಿ ಆಗಮಿಸುವುದು ಮತ್ತು ಆಗಮಿಸಿದ ಕಾರ್ಯ ಪೂರ್ಣಗೊಂಡ ನಂತರ ನೇರವಾಗಿ ಹಿಂತಿರುಗುವುದು. ವಿನಾಕಾರಣ ಯಾವುದೇ ಸ್ಥಳಗಳಿಗೆ ಭೇಟಿ ನೀಡಬಾರದು ಎಂದು ತಿಳಿಸಲಾಗಿದೆ.

ಹೊಟೇಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹಗಳಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಹೊರಡಿಸಿರುವ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೋಂದಾಯಿತ ಹೊಟೇಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅಂಶಗಳ ಬಗ್ಗೆ ಸ್ಥಳೀಯ ಕಾರ್ಯ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ, ಪೊಲೀಸ್, ಆರೋಗ್ಯ ಇಲಾಖೆಗಳು ನಿಗಾವಹಿಸುವುದು. ಈ ಆದೇಶದ ಉಲ್ಲಂಘನೆಯು ಸಂಬಂಧಪಟ್ಟ ಕಾಯ್ದೆಗಳಡಿ ದಂಡನೀಯವಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.