ಮಡಿಕೇರಿ, ಜು. 25: ಕೊರೊನಾ ನಿರ್ವಹಣಾ ವೈದ್ಯಕೀಯ ಕಿಟ್‍ಗಳ ಖರೀದಿ ವ್ಯವಹಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅವ್ಯವಹಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸತ್ಯಾಂಶ ಬಯಲಿಗೆಳೆ ಯಲು ನ್ಯಾಯಾಧೀಶರು ಹಾಗೂ ತಾಂತ್ರಿಕ ವಿಭಾಗದ ಪರಿಣಿತರನ್ನು ನೇಮಕ ಮಾಡುವ ಮೂಲಕ ಸರ್ಕಾರ ಸ್ವತ: ತನಿಖೆಗೆ ಒಳಪಡಲಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಪರಿಕರಗಳ ಖರೀದಿಯ ಬಿಲ್‍ಗಳೇ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕ್ಷಿ ಹೇಳುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಖರೀದಿಗಾಗಿ ಖರ್ಚು ಮಾಡಿದ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಟೀಕಿಸಿದರು.

ಕೊರೊನಾ ಸೋಂಕು ಗ್ರಾಮೀಣ ಭಾಗದವರೆಗೂ ವ್ಯಾಪಕವಾಗಿ ಹಬ್ಬಿದ್ದು, ಇದನ್ನು ನಿಯಂತ್ರಿಸಲು ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲು ಸರ್ಕಾರ ಆದೇಶ ಮಾಡಿದೆಯಾದರೂ ಇಲ್ಲಿಯವರೆಗೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಇದೇ ಕಾರಣಕ್ಕೆ ಕೆಪಿಸಿಸಿಯೇ “ಆರೋಗ್ಯ ಅಭಯ ಹಸ್ತ” ಕಾರ್ಯಕ್ರಮದ ಮೂಲಕ ಪ್ರತೀ ಬೂತ್ ಮಟ್ಟದಲ್ಲಿ ಇಬ್ಬರು ಪ್ರತಿನಿಧಿಗಳನ್ನು ನೇಮಿಸಿ ಸ್ಥಳೀಯ ಜನರ ಆರೋಗ್ಯದ ಮೇಲೆ ನಿಗಾವಹಿಸುತ್ತಿದೆ. ಅಲ್ಲದೆ ಈ ಪ್ರತಿನಿಧಿಗಳಿಗೆ ಭದ್ರತೆಗಾಗಿ ತಲಾ ರೂ. 2 ಲಕ್ಷಗಳ ವಿಮೆಯನ್ನು ಕೆಪಿಸಿಸಿಯೇ ಮಾಡಿಸುತ್ತಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನ ಉಪಸ್ಥಿತರಿದ್ದರು.