ಮಡಿಕೇರಿ, ಜು. 22: ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನಾ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ ಸೂಚಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಫುಲ ಅವಕಾಶಗಳಿದ್ದು, ತೋಟಗಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹೆಚ್ಚಿನ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸುವಂತೆ ಅವರು ನಿರ್ದೇಶನ ನೀಡಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅನುಷ್ಠಾನ ಸಂದರ್ಭ ನಬಾರ್ಡ್, ಗ್ರಾ.ಪಂ., ಮೀನುಗಾರಿಕಾ ಇಲಾಖೆಗಳು ಸೇರಿದಂತೆ ಇತರ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿ. ಈ ಮೂಲಕ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸಿ ಎಂದು ಅವರು ತಿಳಿಸಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಿಂದ ಜಿಲ್ಲೆಯ ರೈತರ ಆರ್ಥಿಕ ಮಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ವರದಿ ನೀಡುವಂತೆ ಕೂಡ ಹೇಳಿದರು. ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ, ಬ್ಯಾಂಕ್‍ಗಳಿಂದಲೂ ಮೀನು ಕೃಷಿ ಮಾಡಲು ಅಗತ್ಯ ಸಾಲ ಸೌಲಭ್ಯ ಯೋಜನೆಗಳಿವೆ. ಈ ನಿಟ್ಟಿನಲ್ಲಿ ನೀರಿನ ಮೂಲಗಳ ನಿರ್ಮಾಣ ಸಂದರ್ಭ ಮೀನು ಕೃಷಿಯ ಬಗ್ಗೆಯೂ ಸಹ ಅವರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಹೆಚ್. ಶಶಿಧರ್ ಮಾತನಾಡಿ, 290 ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧವಿದೆ. ಹೊಸ ತೋಟಗಳ ಸ್ಥಾಪನೆ, ಹಳೆಯ ತೋಟಗಳ ಪುನಃಶ್ಚೇತನ, ನೀರಿನ ಮೂಲಗಳ ನಿರ್ಮಾಣ, ಅಣಬೆ ಕೃಷಿ ಸೇರಿದಂತೆ ಹತ್ತು ಹಲವು ಯೋಜನೆಗಳಿದ್ದು, ಜಿಲ್ಲೆಯನ್ನು ತೋಟಗಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಬಲಪಡಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ಯಾಕ್‍ಹೌಸ್, ಗ್ರಾಮೀಣ ಮಾರುಕಟ್ಟೆಗಳ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳು ರೈತರಿಗೆ ಮತ್ತಷ್ಟು ಸಹಕಾರಿಯಾಗಲಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕೈಗೊಳ್ಳಲೂ ಸಹ ಅವಕಾಶಗಳಿವೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ ಅವರು, ಆಗಸ್ಟ್ 14 ರೊಳಗಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನ ಯೋಜನೆಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸುವಂತೆ ಸೂಚಿಸಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಮೋದ್, ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕ ರೋಶನ್ ಕಾಳಪ್ಪ ಇತರರು ಇದ್ದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನಾ ಕಾರ್ಯಕ್ರಮಗಳ ವಿವರ: 2020-21ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಕೊಡಗು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದ್ದು, ಈ ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್‍ನ ಉಪ ಯೋಜನೆಯಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಹೊಸ ತೋಟಗಳ ಸ್ಥಾಪನೆ: ಹಣ್ಣಿನ ಬೆಳೆಗಳಾದ ಕಂದು ಬಾಳೆ, ಅಂಗಾಂಶ ತಳಿಯ ಬಾಳೆ ಬೆಳೆಗಳನ್ನು ವಿವಿಧ ಅಂತರಗಳಲ್ಲಿ ಹೊಸದಾಗಿ ಬೆಳೆದು ಪ್ರದೇಶ ವಿಸ್ತರಣೆ ಮಾಡಲು ಮತ್ತು ಅವುಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರ್‍ಗೆ ಶೇ. 40 ರ ಗರಿಷ್ಠ ಸಹಾಯದನ ರೂ. 19500 ಕಂದುಬಾಳೆಗೆ ಮತ್ತು ರೂ. 30600 ಅಂಗಾಂಶ ತಳಿಯ ಬಾಳೆಗೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್‍ವರೆಗೆ ನೀಡಲಾಗುತ್ತದೆ.

ಪುಷ್ಪಗಳ ಬೆಳೆಯಲ್ಲಿ ಬಿಡಿ ಪುಷ್ಪಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ. 10 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ ಸಹಾಯದನವನ್ನು ನೀಡಲಾಗುವುದು. ತರಕಾರಿ ಹೈಬ್ರಿಡ್ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ. 20 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ ಸಹಾಯಧನವನ್ನು ನೀಡಲಾಗುವುದು.

ಬಹುವಾರ್ಷಿಕ ತೋಟದ ಬೆಳೆಗಳಾದ ಗೋಡಂಬಿ, ಕೋಕೋ ಪ್ರದೇಶ ವಿಸ್ತರಣೆಗಾಗಿ ರೂ. 12 ಸಾವಿರದವರೆಗೆ ಪ್ರತಿ ಹೆಕ್ಟೇರ್‍ಗೆ ಮತ್ತು ಮೊದಲನೇ ಹಾಗೂ ಎರಡನೇ ವರ್ಷದ ಪಾಲನೆಗಾಗಿ ತಲಾ ರೂ. 4 ಸಾವಿರದಂತೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್‍ವರೆಗೆ ನೀಡಲಾಗುವುದು.

ಹಳೆಯ ತೋಟಗಳ ಪುನಃಶ್ಚೇತನ: ಹಳೆಯ ಹಾಗೂ ಅನುತ್ಪಾದಕ ಕೊಡಗಿನ ಕಿತ್ತಳೆ ಮತ್ತು ಕಾಳುಮೆಣಸು ಬೆಳೆಗಳ ತೋಟಗಳನ್ನು ಪುನಃಶ್ಚೇತನಗೊಳಿಸುವ ಸಲುವಾಗಿ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ರೂ. 10 ಸಾವಿರ ಮೌಲ್ಯದ ಗಿಡಗಳು, ಜೈವಿಕ ಪೋಷಕಾಂಶಗಳು, ಜೈವಿಕ ಪೀಡೆÉ ನಾಶಕ, ಲಘುಪೋಷಕಾಂಶಕ ಇತ್ಯಾದಿ ಪರಿಕರಗಳನ್ನು ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ರೂಪದಲ್ಲಿ ನೀಡಲಾಗುವುದು.

ಅಣಬೆ ಕೃಷಿ: ಅಣಬೆ ಕೃಷಿಯನ್ನು ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಲು ಒಟ್ಟು ವೆಚ್ಚದ ಶೇ. 40ರ ಗರಿಷ್ಠ ರೂ. 8 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ನೀರಿನ ಮೂಲಗಳ ನಿರ್ಮಾಣ: ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ ಫಲಾನುಭವಿಗಳಿಗೆ 20ಮೀx20ಮೀx3ಮೀ (1200 ಛಿmಣ) ವಿಸ್ತೀರ್ಣದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಒಟ್ಟು ವೆಚ್ಚದ ಶೇ. 50 ಗರಿಷ್ಠ ರೂ. 0.75 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಸಂರಕ್ಷಿತ ಬೇಸಾಯ: ಸಂರಕ್ಷಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಉತ್ಕೃಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4 ಸಾವಿರ ಚ.ಮೀ. ಹಸಿರುಮನೆ ಘಟಕಗಳ ನಿರ್ಮಾಣಕ್ಕಾಗಿ ಶೇ. 50 ರಂತೆ ಗರಿಷ್ಠ ರೂ. 447 ಪ್ರತಿ ಚ.ಮೀ.ವರೆಗೆ ಸಹಾಯಧನ ನೀಡಲು ಅವಕಾಶವಿದೆ.

ಸಮಗ್ರ ಪೆÇೀಷಕಾಂಶ, ಕೀಟ/ ರೋಗಗಳ ನಿರ್ವಹಣೆ: ತೋಟಗಾರಿಕೆ ಬೆಳೆಗಳಿಗಾಗಿ ಸಮಗ್ರ ಪೆÇೀಷಕಾಂಶ ಹಾಗೂ ಕೀಟ/ ರೋಗಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದ ರೈತರಿಗೆ ಶೇ 30 ರಂತೆ ಪ್ರತಿ ಹೆಕ್ಟೇರ್‍ಗೆ ರೂ. 1,200 ರಂತೆ ಗರಿಷ್ಠ 4 ಹೆಕ್ಟೇರ್ ಪ್ರದೇಶಕ್ಕೆ ರೂ. 4,800 ಗಳವರೆಗೆ ಸಹಾಯಧನ ನೀಡಲು ಅವಕಾಶವಿದೆ.

ಜೇನು ಸಾಕಾಣಿಕೆ ಮೂಲಕ ಪರಾಗಸ್ಪರ್ಶ ಅಭಿವೃದ್ಧಿ ಕಾರ್ಯಕ್ರಮ: ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶವನ್ನು ಹೆಚ್ಚಿಸಲು ಜೇನು ಕಾಲೋನಿ, ಜೇನು ಪೆಟ್ಟಿಗೆ ಹಾಗೂ ಜೇನುಗಾರಿಕೆಗೆ ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇ. 40 ರಂತೆ ರೂ. 1600 ಜೇನು ಕಾಲೋನಿ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ ರೂ. 8 ಸಾವಿರವರೆಗೆ ಸಹಾಯಧನ ನೀಡಲಾಗುತ್ತದೆ.

ತೋಟಗಾರಿಕೆಯಲ್ಲಿ ಯಾಂತ್ರೀಕರಣ: ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು, ಸ್ವಯಂ ಚಾಲಿತ ಯಂತ್ರೋಪಕರಣಗಳು, 20 ಹೆಚ್.ಪಿ.ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‍ಗಳನ್ನು ಖರೀದಿಸಲು ರೈತರಿಗೆ ಗರಿಷ್ಠ ರೂ. 0.75 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ: ತೋಟಗಾರಿಕೆ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ನೂತನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆಯಲು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ತಾಕುಗಳಿಗೆ ಭೇಟಿ ನೀಡಲು ಮತ್ತು ರೈತರಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಪ್ರತಿ ದಿನದ ಕಾರ್ಯಕ್ರಮಕ್ಕೆ ರೂ. 1 ಸಾವಿರದಂತೆ ವೆಚ್ಚ ಭರಿಸಲು ಅವಕಾಶವಿದೆ.

ಕೊಯ್ಲೋತ್ತರ ನಿರ್ವಹಣೆ: ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಗಳು ಬಹುಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ, ವಿಂಗಡಣೆ, ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್‍ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ ರೂ. 2 ಲಕ್ಷಗಳವರೆಗೆ ಸಹಾಯಧನ ನೀಡಲಾಗುತ್ತದೆ.

ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸ್ಥಾಪನೆ: ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ. 40 ರಂತೆ ಗರಿಷ್ಠ ರೂ. 10 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಉಪಯುಕ್ತವಾದ ಸ್ಥಿರ ಅಥವಾ ಚರ ತಳ್ಳು ಮಾರಾಟ ಗಾಡಿಗಳ ಖರೀದಿಗೆ ಶೇ. 50 ರಂತೆ ಗರಿಷ್ಠ ರೂ 15 ಸಾವಿರವರೆಗೆ ಸಹಾಯಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 14 ಆಗಿದ್ದು, ಅರ್ಜಿಗಳನ್ನು ಸಲ್ಲಿಸುವ ಸ್ಥಳ-ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಮಡಿಕೇರಿ ದೂ:08272-220555, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ)ಸೋಮವಾರಪೇಟೆ ದೂ: 08276-281364, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಪೆÇನ್ನಂಪೇಟೆ ದೂ: 08274-249637 ಇಲ್ಲಿ ಸಲ್ಲಿಸುವಂತೆ ತೋಟಗಾರಿಕೆ ಉಪ ನಿರ್ದೇಶಕ ಹೆಚ್. ಶಶಿಧರ ಕೋರಿದ್ದಾರೆ.