ನಾಪೆÇೀಕ್ಲು, ಜು. 17 : ಗ್ರಾಮೀಣ ಪ್ರದೇಶಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು ಕೂಡು ನಾಟಿ ಪದ್ಧತಿಯಿಂದ ಜನ ದೂರವೇ ಉಳಿದು ಬದಲಾಗಿ ಗದ್ದೆಯಲ್ಲಿ ಬಿತ್ತನೆಗೆ ಡ್ರಂಸೀಡರ್ ಭತ್ತದ ಬಿತ್ತನೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಭತ್ತ ಬಿತ್ತನೆಯ ವಿನೂತನ ಕ್ರಮ ಜನಪ್ರಿಯವಾಗುತ್ತಿದೆ. ಭತ್ತವನ್ನು ಮೊಳಕೆ ಬರಿಸಿ ಇದನ್ನು ಯಂತ್ರದ ಮೂಲಕ ಬಿತ್ತನೆ ಮಾಡುವದು ಈ ಪದ್ಧತಿಯಾಗಿದೆ. ಇದರಿಂದ ಹಣ ಉಳಿತಾಯವಾಗುತ್ತದೆ ಜೊತೆಗೆ ಕೆಲಸವೂ ಹಗುರವಾಗುತ್ತಿದೆ ಸೋಂಕಿನ ಭೀತಿಯ ದೂರ ಆಗುತ್ತದೆ ಎನ್ನುತ್ತಾರೆ ರೈತರು. ಚೆಯ್ಯಂಡಾಣೆ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರೈತರು ಭತ್ತದ ಬಿತ್ತನೆಗಾಗಿ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಪೂರ್ವಜರ ಕಾಲದಿಂದಲೂ ಈ ಗ್ರಾಮದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಕೂಡು ನಾಟಿ ಪದ್ಧತಿಯನ್ನು ಅನುಸರಿಸುತ್ತಿದ್ದರು.
ಡ್ರಂಸೀಡರ್ಬಿತ್ತನೆಗೆ ಒಂದು ದಿನ (24.ಗ) ಭತ್ತವನ್ನು ನೀರಿನಲ್ಲಿ ನೆನೆ ಹಾಕಿ ಬಳಿಕ ಚೀಲದಲ್ಲಿ ಕಟ್ಟಿ ಭಾರ ಇರಿಸಿ ಒಂದು ದಿನ ಮೊಳಕೆಯೊಡೆಯಲು ಬಿಟ್ಟು ಬಿತ್ತನೆ ಮಾಡಬಹುದಾಗಿದೆ. ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಪ್ರಸಕ್ತ ವರ್ಷ ಪ್ರಾಯೋಗಿಕವಾಗಿ ತಮ್ಮ ಎರಡು ಎಕರೆ ಗದ್ದೆಯಲ್ಲಿ ಡ್ರಂಸೀಡರ್ ಭತ್ತದ ಬಿತ್ತನೆ ಕೈಗೊಂಡಿದ್ದಾರೆ. ಈ ಹಿಂದೆ 50 ಕೆ.ಜಿ. ಭತ್ತದ ಬಿತ್ತನೆ ಮಾಡಬೇಕಾಗಿತ್ತು. ಆದರೆ ಈ ಪದ್ಧತಿಯಲ್ಲಿ ಕೇವಲ 20 ಕೆ.ಜಿ ಭತ್ತ ಸಾಕು. ಭತ್ತದ ಬಿತ್ತನೆ, ಅಗೆ ತೆಗೆಯುವುದು ನಾಟಿ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗಾಗಿ 5ರಿಂದ 6 ಸಾವಿರ ರೂ. ಉಳಿತಾಯವಾಗಿದೆ ಎನ್ನುತ್ತಾರೆ. ಗ್ರಾಮದ ಬಿಳಿಯಂಡ್ರ ಉತ್ತಪ್ಪ, ಸದಾಶಿವ ಮತ್ತಿತರ ರೈತರು ಈ ಕ್ರಮವನ್ನು ಅನುಸರಿಸುತ್ತಿದ್ದಾರೆ.
ಬಿತ್ತನೆಗಾಗಿ ಬಳಸುವ ಡ್ರಂಸೀಡ್ ಬೆಲೆಯೂ ಕಡಿಮೆ. ಐದುಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರಕುತ್ತಿದೆ. ಕೂಡು ನಾಟಿ ಪದ್ಧತಿಯಲ್ಲಿ ಹಲವು ಜನರ ಅಗತ್ಯವಿತ್ತು ಆದರೆ ಈ ಪದ್ಧತಿಯಲ್ಲಿ ಒಬ್ಬರೇ ಕೆಲಸ ನಿರ್ವಹಿಸ ಬಹುದಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಜನರು ತಾಂತ್ರಿಕತೆಯ ಮೊರೆ ಹೋಗಿ ಸಮಯ ಹಾಗೂ ಹಣ ಉಳಿತಾಯ ಮಾಡುತ್ತಿದ್ದಾರೆ.
-ದುಗ್ಗಳ ಸದಾನಂದ