ಮಡಿಕೇರಿ, ಜು. 17: ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಕೊರೊನಾ ರೋಗ ನಿವಾರಣಾರ್ಥವಾಗಿ ಹಾಗೂ ರೋಗಕ್ಕೆ ಶೀಘ್ರ ಉತ್ತಮ ಔಷಧಿ ದೊರೆಯಲಿ ಎಂದು ಪ್ರಾರ್ಥಿಸಿ ಧನ್ವಂತರಿ ಯಾಗ ನಡೆಸಲಾಯಿತು.

ಸಂಘದ ಅಧ್ಯಕ್ಷ ಡಾ. ಮಹಾಭಲೇಶ್ವರ್ ಭಟ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆ, ಪುನಸ್ಕಾರ, ಹೋಮಗಳು ನಡೆದವು. ಕೊರೊನಾ ರೋಗವು ಪ್ರಪಂಚದಾದ್ಯಂತ ಹರಡಿ ಮಾನವ ಕುಲದ ಜೀವನ ಹಾಗೂ ಜೀವವನ್ನು ಕಿತ್ತು ತಿನ್ನುತ್ತಿದೆ. ಇಂತಹ ರೋಗಕ್ಕೆ ವಿಜ್ಞಾನಿಗಳು, ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟು ಔಷಧಿ ಕಂಡು ಹಿಡಿಯಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಪುರಾಣ ಪುರುಷನಾದ ಔಷಧಿಯ ಅಧಿಪತಿ ಧನ್ವಂತರಿಯನ್ನು ಆರಾಧಿಸಿ, ಪೂಜಿಸಿ ಅವರ ಕೃಪೆಗೆ ಪಾತ್ರರಾಗಬೇಕಾಗಿದೆ ಎಂದು ಡಾ. ಮಹಾಭಲೇಶ್ವರ್ ಭಟ್ ತಿಳಿಸಿದರು.

ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿಯೂ ಈ ಧನ್ವಂತರಿ ಯಾಗ ಮತ್ತು ಜಪವನ್ನು ಆಚರಿಸಬೇಕು. ಅದರಲ್ಲೂ ಬ್ರಾಹ್ಮಣ ಸಮುದಾಯ ಹಾಗೂ ಅರ್ಚಕ ವೃತ್ತಿಯಲ್ಲಿದ್ದವರು ಹಾಗೂ ಜಿಲ್ಲಾದ್ಯಂತ ಇರುವ ಸಂಘದ ಸದಸ್ಯರು ಸ್ವಯಂ ಪ್ರೇರಿತರಾಗಿ ಈ ಕಾರ್ಯವನ್ನು ನಡೆಸುವಂತೆ ಕರೆ ನೀಡಿದರು.

ಈ ಸಂದರ್ಭ ಸಂಘದ ಕಾರ್ಯದರ್ಶಿ ಕೆ.ಎಸ್. ರಾಮ್‍ಭಟ್, ಖಜಾಂಚಿ ಹೆಚ್.ಆರ್. ಮುರುಳಿಭಟ್, ಸದಸ್ಯರುಗಳಾದ ಎಂ.ಜಿ. ಮಾಧವರಾಜ್, ಎಂ.ಪಿ. ಶ್ರೀನಿವಾಸ್, ಎಂ.ಜಿ. ನಾರಾಯಣರಾವ್, ಎಂ.ಎಂ. ವಿಜಯಕುಮಾರ್, ಎಂ.ಎಂ. ಸುರೇಶ್‍ಕುಮಾರ್, ನಟರಾಜ್ ಭಟ್, ರಾಘವೇಂದ್ರ ಹಾಜರಿದ್ದರು.

ಪೊನ್ನಂಪೇಟೆಯ ಜನಾರ್ಧನ್ ಭಟ್, ಮೂರ್ನಾಡಿನ ವಿಘ್ನೇಶ್ ಭಟ್, ಅಮಿತ್ ಭಟ್ ಹಾಗೂ ಬಿಳಿಗೇರಿಯ ಸುಬ್ರಮಣ್ಯ ಭಟ್ ಹೋಮವನ್ನು ನಡೆಸಿಕೊಟ್ಟರು.