ಮಡಿಕೇರಿ, ಜು. 4: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯು (PಒSಗಿಂಓiಜh) ವಿಶೇಷ ಕಿರುಸಾಲ ಸೌಲಭ್ಯ ಯೋಜನೆ ಅಭಿಯಾನ ರೀತಿಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ಯೋಜನೆಯ ಲಾಭ ಪಡೆದುಕೊಳ್ಳಲು ಬೀದಿ ವ್ಯಾಪಾರಸ್ಥರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

2022 ರವರೆಗೆ ಈ ಯೋಜನೆಯ ಅಭಿಯಾನ ನಡೆಯಲಿದೆ. ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ ಬ್ಯಾಂಕುಗಳ ಮೂಲಕ ರೂ. 10,000 ವರೆಗೆ ಸಾಲ ಸೌಲಭ್ಯ ನೀಡುವುದು, ನಿಯಮಿತವಾಗಿ ಸಾಲ ಮರು ಪಾವತಿ ಮಾಡಿದವರಿಗೆ ಶೇ. 7 ಬಡ್ಡಿ ಸಹಾಯ ಧನ ಕೇಂದ್ರ ಸರ್ಕಾರದಿಂದ ನೀಡುವುದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ಹಾಗೂ ಬಹುಮಾನ ನೀಡುವ ಉದ್ದೇಶಗಳನ್ನು ಈ ಯೊಜನೆ ಹೊಂದಿದೆ.

ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರು ಅರ್ಹ ಫಲಾನುಭವಿಗಳಾಗುತ್ತಾರೆ. ಅಲ್ಲದೇ ಈಗಾಗಲೇ ಪಟ್ಟಣ ಪಂಚಾಯಿತಿಯಲ್ಲಿ ಕೈಗೊಂಡ ಬೀದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ಬಿಟ್ಟಹೋಗಿರುವ ಮತ್ತು ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದು ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರು ಈ ಯೋಜನೆಯಡಿ ಸಾಲ ಪಡೆಯಬಹುದು.

ಸದರಿ ಯೋಜನೆಯಡಿ ಸೌಲಭ್ಯ ಪಡೆಯಲು ಬೀದಿ ವ್ಯಾಪಾರಸ್ಥರು ಬಿಪಿಎಲ್ ಕಾರ್ಡ್, ಆಧಾರ ಕಾರ್ಡ್, ಚುನಾವಣೆ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ ಬಿಲ್ ಪ್ರತಿ, ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಈಗಾಗಲೇ ವಿತರಿಸಿದ ಗುರುತಿನ ಚೀಟಿ ಹಾಗೂ ಇನ್ನಿತರ ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

ತಾ. 15 ರೊಳಗೆ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ವೀರಾಜಪೇಟೆ, ಮಡಿಕೇರಿ ನಗರಸಭಾ ಪೌರಾಯುಕ್ತರು 9481770269 ಅನ್ನು ಸಂಪರ್ಕಿಸಬಹುದು.