ಲೇಹ್, ಜು.3: ವಿಸ್ತರಣೆಯ ಕಾಲ ಮುಗಿದಿದೆ ; ಇದು ವಿಕಾಸ ಯುಗ ಎಂದು ಪ್ರಧಾನಿ ಚೀನಾಗೆ ಮುನ್ನೆಚ್ಚರಿಕೆ ನೀಡಿದ್ದಾರೆ.ಚೀನಾ-ಭಾರತೀಯ ಸೈನಿಕರ ಸಂಘರ್ಷಕ್ಕೆ ಕಾರಣವಾಗಿರುವ ಲಡಾಖ್‍ನ ನಿಮ್ಮೂ ಸೆಕ್ಟರ್‍ಗೆ ಇಂದು ದಿಢೀರ್ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಚೀನಾ ದೇಶವು ತನ್ನ ಗಡಿಯನ್ನು ಅತಿಕ್ರಮಿಸಿ ವಿಸ್ತರಣೆಗೊಳಿಸಲು ನಡೆಸಿರುವ ಯತ್ನಕ್ಕೆ ಪ್ರಧಾನಿ ಗಡಿ ಪ್ರದೇಶದಲ್ಲಿ ಯೋಧರ ನಡುವೆಯೇ ನಿಂತು ದಿಟ್ಟ ಎಚ್ಚರಿಕೆ ನೀಡಿದ್ದಾರೆ. ಶ್ರೀ ಕೃಷ್ಣನು ಸಂದರ್ಭ ಬಂದಾಗ ಈ ನೆಲದಲ್ಲಿ ತನ್ನ ವಿಷ್ಣು ಚಕ್ರವನ್ನು ಪ್ರಯೋಗ ಮಾಡಬೇಕಾಯಿತು ಎಂಬದನ್ನು ಜ್ಞಾಪಿಸಿದ್ದಾರೆ.“ನಿಮ್ಮ ಶೌರ್ಯ ವಿಶ್ವಕ್ಕೇ ಒಂದು ಸಂದೇಶ ರವಾನಿಸಿದೆ” ಎಂದು ಇತ್ತೀಚೆಗೆ ಗಡಿಯಲ್ಲಿ ದೇಶ ರಕ್ಷಣಾ ಕಾರ್ಯದಲ್ಲಿ ಹುತಾತ್ಮರಾದ 20 ಮಂದಿ ಯೋಧರ ಬಲಿದಾನವನ್ನು ನೆನಪಿಸಿಕೊಂಡು ಅವರು ಅಭಿಪ್ರಾಯಪಟ್ಟರು. ಲಡಾಖ್‍ನಲ್ಲಿ ರಕ್ಷಣಾ ನಿರತ ಭಾರತೀಯ ಯೋಧರನ್ನು ಕೊಂಡಾಡಿದರು.

“ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ. ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ” ಎಂದು ಹೇಳಿದರು.

“ಯಾವ ಎತ್ತರದ ಪ್ರದೇಶದಲ್ಲಿ ನೀವು ಕರ್ತವ್ಯ ನಿರ್ವಹಿಸುತ್ತಿರುವಿರೋ ಅದಕ್ಕಿಂತಲೂ ಎತ್ತರವಾದದ್ದು ನಿಮ್ಮ ಧೈರ್ಯ ಮತ್ತು ಶೌರ್ಯ. ನಿಮ್ಮ ತ್ಯಾಗ ಮತ್ತು ಬಲಿದಾನ, ಶೌರ್ಯ ಮತ್ತು ಸಾಹಸ ಆತ್ಮ ನಿರ್ಭರ್ ಭಾರತದ ಸಂಕಲ್ಪಕ್ಕೆ ಬಲ ನೀಡಿದೆ. ಸ್ವಾವಲಂಬಿಗಳಾಗಬೇಕು ಎಂಬ ನಮ್ಮ ಸಂಕಲ್ಪ ಇದೀಗ ಇನ್ನಷ್ಟು ಗಟ್ಟಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು.

“ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ. ದುರ್ಬಲರು ಶಾಂತಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಲು ಧೈರ್ಯವೂ ಅಗತ್ಯ. ವಿಶ್ವ ಯುದ್ಧಗಳಿರಲಿ ಅಥವಾ ಶಾಂತಿ ಇರಲಿ; ಅಗತ್ಯ ಎದುರಾದಾಗ ನಮ್ಮ ಧೈರ್ಯವು ಶಾಂತಿ ಸ್ಥಾಪನೆಯಲ್ಲಿ ಜಯ ಸಾಧಿಸಿದ್ದನ್ನು ಜಗತ್ತು ನೋಡಿದೆ. ಮಾನವೀಯತೆಯ ಸುಧಾರಣೆಗಾಗಿ ನಾವು ಕೆಲಸ ಮಾಡಿದ್ದೇವೆ. ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹೊರಟವರು ಸೋಲನುಭವಿಸಿದ್ದು ಅಥವಾ ವಿರೋಧ ಎದುರಿಸಿ ಓಡಿಹೋದುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ದಿಟ್ಟ ನುಡಿಯಾಡಿದರು. ಮಹಿಳಾ ಯೋಧರನ್ನೂ ನಾನು ನೋಡುತ್ತಿದ್ದೇನೆ. ಯುದ್ಧಭೂಮಿಯಲ್ಲಿ ಇದು ಸ್ಫೂರ್ತಿದಾಯಕ. ಇಂದು ನಾನು ನಿಮ್ಮ ಮಹಿಮೆಯ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಲಡಾಖ್‍ನ ನಿಮ್ಮೂ ಸೆಕ್ಟರ್‍ಗೆ ಬಂದಿಳಿದ ಪ್ರಧಾನಿ ಮೋದಿ ಅವರೊಂದಿಗೆ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಾಣೆ ಇದ್ದರು.

ಭೇಟಿ ವೇಳೆ ಪ್ರಧಾನಿ ಮೋದಿ ಸೇನಾಧಿಕಾರಿಗಳಿಂದ ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಬಳಿಕ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದರು. ವಿಶೇಷವೆಂದರೆ, ಇದಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಲೇಹ್‍ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ಅಲ್ಲಿಗೆ ತಲುಪಿದ್ದಾರೆ.