ಮಡಿಕೇರಿ, ಜೂ. 4: ರಾಜ್ಯ ಹೈಕೋರ್ಟ್‍ನ ನಿರ್ದೇಶನದಂತೆ ಕೊಡಗಿನಲ್ಲಿಯೂ ನ್ಯಾಯಾಲಯದ ಕಲಾಪಗಳಿಗೆ ಯಾವುದೇ ಧಕ್ಕೆ ಇಲ್ಲ. ಆದರೆ, ಮೊಕದ್ದಮೆಗಳನ್ನು ಆದ್ಯತೆ ಮೇರೆ ಪರಿಗಣಿಸಿ ಪ್ರಕರಣಗಳನ್ನು ದಿನದ ಪರಿಮಿತಿ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಮಡಿಕೇರಿಯ ಹಿರಿಯ ವಕೀಲ ಎಂ.ಎ. ನಿರಂಜನ್ ಮಾಹಿತಿಯಿತ್ತಿದ್ದಾರೆ. ಅಲ್ಲದೆ, ಹೊಸದಾಗಿ ವ್ಯಾಜ್ಯಗಳನ್ನು ಸಲ್ಲಿಸಲು ಮುಂದಿನ ಜುಲೈ 6ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಚೆಕ್‍ಗಳ ಬೌನ್ಸ್ ಪ್ರಕರಣಗಳಾಗಲಿ, ಸಿವಿಲ್ ಪ್ರಕರಣಗಳಾಗಲಿ ಸೆಕ್ಷನ್ 4ರ ಅನ್ವಯ ವಿಚಾರಣೆಗೆ ಲಿಮಿಟೇಷನ್ ಆ್ಯಕ್ಟ್ ಪ್ರಕಾರ ಮುಂದಿನ 1 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ವಕೀಲರು ವಿವರವಿತ್ತಿದ್ದಾರೆ. ಆದುದರಿಂದ ಈ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಪ್ರಸ್ತುತ ಪರಿಮಿತಿಯಲ್ಲಿ ತುರ್ತು ಕ್ರಿಮಿನಲ್ ಪ್ರಕರಣಗಳನ್ನೊಳಗೊಂಡಂತೆ ಮೊಕದ್ದಮೆಗಳು ನಿರಾತಂಕವಾಗಿ ನಡೆಯಲಿದೆ ಎಂದು ಅವರು ಖಚಿತಪಡಿಸಿದ್ದಾರೆ.