ಕುಶಾಲನಗರ, ಜೂ. 4: ಮಳೆಗಾಲದ ಸಂದರ್ಭ ತುರ್ತು ಪರಿಸ್ಥಿತಿ ನಿರ್ವಹಿಸಲು ಕುಶಾಲನಗರ ಪಟ್ಟಣದ ನೋಡಲ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ಅವರು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ತಂಡದೊಂದಿಗೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದರು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅವರೊಂದಿಗೆ ಪಟ್ಟಣದ ದಂಡಿನಪೇಟೆ, ರಸೂಲ್ ಬಡಾವಣೆ, ಶೈಲಜಾ ಬಡಾವಣೆ ಮತ್ತಿತರ ಬಡಾವಣೆಗಳಿಗೆ ಭೇಟಿ ನೀಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಮಾಹಿತಿ ಕಲೆಹಾಕಿದರು.

ಇದೇ ಸಂದರ್ಭ ಕುಶಾಲನಗರ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಪರಿಶೀಲನೆಗೆ ಭೇಟಿ ನೀಡಿದ ಶಾಸಕರಾದ ಅಪ್ಪಚ್ಚುರಂಜನ್ ಅವರಿಂದ ಅಧಿಕಾರಿಗಳು ಸಲಹೆ ಪಡೆದರು. ಮಳೆಗಾಲ ಮುಗಿಯುವ ತನಕ ದಿನದ 24 ಗಂಟೆ ಕಾಲ ನದಿ ನೀರಿನ ಮಟ್ಟದ ಬಗ್ಗೆ ನಿಗಾವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಆರೋಗ್ಯಾಧಿಕಾರಿ ಉದಯಕುಮಾರ್ ಮತ್ತಿತರರು ಇದ್ದರು.