ಮಡಿಕೇರಿ. ಜೂ. 2 : ಕೊಡಗು ಜಿಲ್ಲೆಯಲ್ಲಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳನ್ನು ಜೂ. 8 ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ, ಸಮರ್ಪಕ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ವಹಿವಾಟು ಪ್ರಾರಂಭಿಸಲು ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯವಾಗಿರುವ ವಿವಿಧ ಸಂಸ್ಥೆಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ.ಈ ಕುರಿತು ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಅಸೋಸಿಯೇಷನ್ ಅಧ್ಯಕ್ಷ ಬಿ. ಆರ್. ನಾಗೇಂದ್ರಪ್ರಸಾದ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಟ್ರಾವಲ್ ಮತ್ತು ಟೂರ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೊಟೇಲ್, ರೆಸಾರ್ಟ್ ರೆಸ್ಟೋರೆಂಟ್, ಅಸೋಸಿಯೇಷನ್‍ನ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಅವರು ಜಿಲ್ಲೆಯಲ್ಲಿ ವ್ಯವಸ್ಥಿತವಾದ ಹಾಗೂ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರು ವವರು ಹಲವು ಬದಲಾವಣೆಗಳನ್ನು ಹಾಗೂ ನೂತನ ಕ್ರಮಗಳನ್ನು ಅಳವಡಿಸುವ ಬಗ್ಗೆ ಕೂಡ ಚಿದ್ವಿಲಾಸ್ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.ಮುಂಬರುವ ದಿನಗಳಲ್ಲಿ ಕೊಡಗು ಜಿಲ್ಲಾ ಪ್ರವಾಸೋದ್ಯಮ ಕ್ಷೇತ್ರ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಹಲವು ಪ್ರವಾಸಿ ಏಜೆನ್ಸಿಗಳು ಕಳುಹಿಸಿರುವ ನಿಯಮಗಳ ಬಗ್ಗೆ ಅವರು ವಿವರಿಸಿದ್ದಾರೆ.

- ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಬೇಕು.

- ಸಾಮಾಜಿಕ ಅಂತರವನ್ನು ಪ್ರವಾಸಿಗರು ಕಾಯ್ದುಕೊಳ್ಳಬೇಕು.

- ಪ್ರತೀ ಕೋಣೆಯನ್ನೂ ಸ್ಯಾನಿಟೈಸ್ ಮಾಡಬೇಕು. ಸ್ವಾಗತ, ಅಡುಗೆ ಕೋಣೆ, ಡೈನಿಂಗ್‍ಹಾಲ್, ಅತಿಥಿಗಳ ಕೊಠಡಿಗಳಲ್ಲಿ ಸ್ಯಾನಿಟೈಜರ್ ಇಡಬೇಕು.

-ಕೊಠಡಿಯ ಬೆಡ್‍ಶೀಟ್, ಇತರ ಬಟ್ಟೆಗಳನ್ನು

(ಮೊದಲ ಪುಟದಿಂದ) ಅಂಗೀಕೃತ ಡಿಟರ್ಜೆಂಟ್ ಗಳನ್ನು ಬಳಸಿಯೇ ಒಗೆಯಬೇಕು.

- ಊಟ ಬಡಿಸುವ ಸಂದರ್ಭ ನೌಕರರು ಮುಖಗವಸು, ಕೈಗವಸು, ತಲೆಗವಸು ಹೊದ್ದಿರಬೇಕು.

-ಅತಿಥಿಗಳಿಗೆ ಸೇವಾ ಅಗತ್ಯಕ್ಕೆ ನೌಕರರು ಸದಾ ಲಭ್ಯವಿರಬೇಕು.

- ಪ್ರವಾಸಿ ಬಂದದ್ದು ಎಲ್ಲಿಂದ ಎಂಬ ಬಗ್ಗೆ ಪ್ರಯಾಣದ ಸಮಗ್ರ ವಿವರವನ್ನು ದಾಖಲುಗೊಳಿಸಬೇಕು.

- ಉಗುಳುವುದನ್ನು ಜಿಲ್ಲೆಯಾದ್ಯಂತ ಕಡ್ಡಾಯವಾಗಿ ನಿಷೇಧಿಸಿದ ಆದೇಶವನ್ನು ಪಾಲಿಸುವ ನಾಮಫಲಕಗಳನ್ನು ವಾಸ್ತವ್ಯ ಜಾಗದ ಆವರಣದಲ್ಲಿ ಹಾಕಬೇಕು.

- ಪರಿಸರ, ನದಿ ಮಾಲಿನ್ಯವಾಗದಂತೆ ಗಮನಹರಿಸಲೇಬೇಕು.

- ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಬೇಕು.

-ಜಿಲ್ಲೆಯಾದ್ಯಂತ ಏಕರೀತಿಯ ಪ್ರವಾಸೋದ್ಯಮ ಮಾರ್ಗಸೂಚಿಯನ್ನು ಸಂಸ್ಥೆಗಳು ಜಂಟಿಯಾಗಿ ಜಾರಿಗೊಳಿಸಬೇಕು.

-ಪ್ರವಾಸಿಗರು ಸುರಕ್ಷತಾ ನಿಯಮ ಪಾಲಿಸುವ ನಿಟ್ಟಿನಲ್ಲಿ ಮಾಹಿತಿ ಫಲಕ ಅಲ್ಲಲ್ಲಿ ಅಳವಡಿಸಬೇಕು.

- ಸದ್ಯಕ್ಕೆ ಈಜುಕೊಳ ತೆರೆಯಬಾರದು.

- ಪ್ರತೀ ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳಲ್ಲಿ ಸುಸಜ್ಜಿತ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿರಬೇಕು. ತುರ್ತು ಸಂದರ್ಭದಲ್ಲಿ ಲಭ್ಯವಿರುವ ವೈದ್ಯರ ಬಗ್ಗೆ ಕಡ್ಡಾಯವಾಗಿ ಮಾಹಿತಿ ಹೊಂದಿರಬೇಕು.

- ಇಂತಹ ಸಂದಿಗ್ಧ ಕಾಲದಲ್ಲಿ ಸಂಸ್ಥೆಯ ಮಾಲೀಕರು ಪರಿಸ್ಥಿತಿಯನ್ನು ಅರಿತುಕೊಂಡು ತಮ್ಮ ಸಂಸ್ಥೆಯ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಜವಾಬ್ದಾರಿಗಳನ್ನು ಕೇವಲ ನೌಕರರುಗಳಿಗೆ ಬಿಡದೆ ಜಿಲ್ಲೆಯ ಆತಿಥ್ಯವನ್ನು ಪ್ರವಾಸಿಗರು ಗೌರವಿಸುವ ನಿಟ್ಟಿನಲ್ಲಿ ಮಾಲೀಕರುಗಳು ಕೂಡ ಪಾಲುಗಾರರಾಗಬೇಕು

- ಗುಣಮಟ್ಟ ಹಾಗೂ ಪೌಷ್ಟಿಕಾಂಶದ ಆಹಾರಕ್ಕೆ ಆದ್ಯತೆ ನೀಡಬೇಕು.

- ಸಿಸಿ ಕ್ಯಾಮರಾವನ್ನು ಅತಿಥಿ ಗೃಹಬಾಗಿಲಲ್ಲಿ ಮಾತ್ರವಲ್ಲದೆ ಹೊರಭಾಗದ ಚಟುವಟಿಕಾ ಪ್ರದೇಶಗಳಲ್ಲೂ ಅಳವಡಿಸಬೇಕು.

-ಪ್ರವಾಸಿಗರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಮೊಬೈಲ್‍ನಲ್ಲಿ ಅಳವಡಿಸಿಕೊಂಡಿರಬೇಕು.

-ಮದ್ಯದ ಬಾಟಲ್‍ಗಳು ಹಾಗೂ ಕಸವನ್ನು ರಸ್ತೆ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಬಿಸಾಕದಂತೆ ಪ್ರವಾಸಿಗರ ಗಮನ ಸೆಳೆಯಬೇಕು. ಅಲ್ಲದೆ ಈ ಬಗ್ಗೆ ನಾಮಫಲಕವನ್ನು ಅಳವಡಿಸಬೇಕು.

-ಪ್ರವಾಸಿಗರನ್ನು ಕರೆದು ತರುವ ವಾಹನ ಚಾಲಕರ ಶುಚಿತ್ವ ಹಾಗೂ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಎಲ್ಲ ಹೋಂಸ್ಟೇಗಳಲ್ಲೂ ವಾಹನ ಚಾಲಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡುವುದು ಎಲ್ಲರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

-ರೆಸಾರ್ಟ್ ಹಾಗೂ ಲಾಡ್ಜ್‍ಗಳಲ್ಲಿ ರಾತ್ರಿಯ ಊಟದ ಸಮಯ ಹಾಗೂ ಅತಿಥಿಗಳು ಕೊಠಡಿ ಸೇರಿಕೊಳ್ಳಬೇಕಾದ ಸಮಯ ನಿಗದಿಯಾಗಿರುವಂತೆ ಹೋಂಸ್ಟೇಗಳಲ್ಲಿಯೂ ರಾತ್ರಿಯ ಸಮಯ ಕಡ್ಡಾಯಗೊಳಿಸಬೇಕು.

-ಕೆಲವೊಂದು ಕಡೆ ಅತಿಥಿಗಳಿಗೆ ಹೊಟೇಲ್‍ಗಳಿಂದ ಆಹಾರ ಸರಬರಾಜು ಮಾಡುತ್ತಿದ್ದು ಈ ಬಗ್ಗೆ ಶುಚಿತ್ವವಿರುವ ಹೊಟೇಲ್‍ಗಳನ್ನೇ ಆಯ್ಕೆ ಮಾಡಿಕೊಳ್ಳು ವುದು ಅತ್ಯಗತ್ಯ.

- ಕೊರೊನಾ ಭಯ ಹೋಗುವವರೆಗೆ ಅತಿಥಿಗಳಿಗೆ ಊಟ-ತಿಂಡಿ ಸರಬರಾಜು ಮಾಡುವ ಸಂದರ್ಭದಲ್ಲಿ ಬಾಳೆ ಎಲೆ ಹಾಗೂ ಉಪಯೋಗಿಸಿ ಬಿಸಾಡುವ ತಟ್ಟೆ, ಲೋಟಗಳನ್ನು ಬಳಸುವುದು ಉತ್ತಮ. ಇದರಿಂದ ಪ್ರವಾಸಿಗರಿಗೂ ಆಹಾರ ಸೇವಿಸುವ ಬಗ್ಗೆ ವಿಶ್ವಾಸ ಮೂಡುತ್ತದೆ.

-ಪ್ರವಾಸಿಗರು ಬಂದಿರುವ ವಾಹನ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿ ಕೊಳ್ಳುವುದು ಒಳಿತು.

-ರೆಸಾರ್ಟ್, ಅತಿಥಿ ಗೃಹಗಳು ಹಾಗೂ ಹೋಂಸ್ಟೇಗಳು ಅತಿಥಿಗಳಿಗೆ ಏಕ ರೀತಿಯ ಹಲವು ನಿಯಮಗಳನ್ನು ಜಾರಿಗೊಳಿಸಿ, ಅತಿಥಿಗಳು ಬರುವ ಮೊದಲೇ ವಾಟ್ಸಾಪ್ ಅಥವಾ ಇಮೇಲ್ ಮೂಲಕ ಅವರುಗಳಿಗೆ ಕಳುಹಿಸಬೇಕು.

ಇಂಥ ಮಾರ್ಗಸೂಚಿ ಅನುಷ್ಠಾನಗೊಳಿಸುವ ಮೂಲಕ ಕೊಡಗು ಪ್ರವಾಸಿಗರಿಗೆ ಸುರಕ್ಷಿತ ಎಂಬ ಭಾವನೆಗೆ ಪ್ರತಿಯೋರ್ವ ಪ್ರವಾಸೋದ್ಯಮಿಯೂ ಕಾರಣ ರಾಗಬೇಕೆಂದು ನಾಗೇಂದ್ರಪ್ರಸಾದ್, ಅನಂತಶಯನ, ಸತ್ಯ ಜಂಟಿ ಹೇಳಿಕೆಯಲ್ಲಿ ಮನವಿಮಾಡಿದ್ದಾರೆ.

ಕೋವಿಡ್-19ರ ಲಾಕ್‍ಡೌನ್ ನಂತರ ಪ್ರಾರಂಭವಾಗುವ ಕೊಡಗು ಜಿಲ್ಲಾ ಪ್ರವಾಸೋದ್ಯಮ ಹೊಸ ರೀತಿಯ ಚಿಂತನೆ, ಯೋಜನೆಗಳಿಂದ ಕೂಡಿರ ಬೇಕೆಂದೂ ಪ್ರವಾಸೋದ್ಯಮ ಸಂಸ್ಥೆಗಳ ಪ್ರಮುಖರು ಮನವಿ ಮಾಡಿದ್ದಾರೆ.