ಶನಿವಾರಸಂತೆ, ಮೇ 29: ಶನಿವಾರಸಂತೆ ಮಧ್ಯಪೇಟೆಯಲ್ಲಿ ವಾಸವಿರುವ ಮನ್ಸೂರ್ ಪಾಷಾ ಹಾಗೂ ಪಕ್ಕದಲ್ಲೇ ವಾಸವಿರುವ ತಂಗಿ ಜವರಿಭಾನು ಅವರುಗಳ ನಡುವೆ ತಮ್ಮ ತಂದೆ-ತಾಯಿಯರು ಜೀವಿಸಿ ಬಿಟ್ಟು ಹೋಗಿರುವ ಪಕ್ಕದ ಮನೆಯ ಬೀಗ ಕೊಡುವಂತೆ ಜಗಳವಾಗಿದ್ದು, ಅಣ್ಣ ಬೀಗ ಒಡೆದು ಒಳನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜವರಿಭಾನು ಹಾಗೂ ಮಗ ಅದ್ನಾನ್ ಸಯ್ಯದ್ ಮನೆಯಲ್ಲಿದ್ದಾಗ ಅಣ್ಣ ಮನ್ಸೂರ್ ಪಾಷಾ ಹಾಗೂ ಅವರ ಮಗ ಅದ್ನಾನ್ ಪಾಷಾ ಇಬ್ಬರು ಮನೆಯ ಹತ್ತಿರಬಂದು ನನ್ನ ತಂದೆ-ತಾಯಿ ಬಿಟ್ಟು ಹೋಗಿರುವ ಪಕ್ಕದ ಮನೆಯ ಬೀಗದ ಕೀ ಕೊಡುವಂತೆ ಕೇಳಿದಾಗ ತಂಗಿ ಕೀ ನನ್ನ ಹತ್ತಿರವಿಲ್ಲ ಎಂದಾಗ ಅಣ್ಣ-ತಂಗಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಣ್ಣನ ಮಗ ಅದ್ನಾನ್ ಪಾಷಾ ಆಕೆಯ ಕೈ ಹಿಡಿದು ತಿರುಗಿಸಿ ನೋವುಪಡಿಸಿದ ಅಣ್ಣ ಹಾಗೂ ಮಗ ಸೇರಿಕೊಂಡು ತಂದೆ-ತಾಯಿಯರು ವಾಸವಿದ್ದ ಮನೆಯ ಬೀಗ ಒಡೆದು ಒಳನುಗ್ಗಿ ಟಿ.ವಿ., ಮಂಚ, ದಿವಾನಕಾಟ್, ಹಾಸಿಗೆ, ಶೋಕೇಸ್‍ಗಳನ್ನು ಒಡೆದು ಚಲ್ಲಾಪಿಲ್ಲಿ ಮಾಡಿ, ಮನೆಯ ಒಳಗಡೆ ಎಲ್ಲಾ ಬಾಗಿಲುಗಳನ್ನು ಒಡೆದು ಹಾಕಿದ್ದಾರೆ ಎಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಕೃಷ್ಣನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ ಕಾಲಂ 323, 506, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.