ಕೊಡವ ಹಾಕಿ ರಂಗದ ಇತಿಹಾಸಕಾರ ಇನ್ನು ನೆನಪು ಮಾತ್ರ. ಪಾಂಡಂಡ ಕುಟ್ಟಪ್ಪ ಕುಟ್ಟಣಿ ಮತ್ತು ಅವರ ಸಹೋದರ ಕಾಶಿ ಪೊನ್ನಪ್ಪ ಅವರು 1997ರಲ್ಲಿ ಕಂಡ ಕನಸಿನ ಕೂಸು ವಿಶ್ವಮಟ್ಟಕ್ಕೆ ಬೆಳೆಯುತ್ತದೆ, ಕೊಡಗಿನ ಕ್ರೀಡಾರಂಗದಲ್ಲಿ ಇತಿಹಾಸ ಸೃಷ್ಟಿಸುತ್ತದೆ ಎಂದು ಸ್ವತಃ ಅವರಿಗೆ ನಿರೀಕ್ಷೆ ಇರಲಿಲ್ಲ. ಅಷ್ಟರ ಮಟ್ಟಿಗೆ ಕೊಡಗಿನ ಕ್ರೀಡಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೊಡವ ಹಾಕಿ ನಮ್ಮೆಯು 1997ರಲ್ಲಿ ಕರಡದಲ್ಲಿ 60 ತಂಡಗಳೊಡನೆ ಆರಂಭವಾಯಿತು. ನಂತರದ ದಿನಗಳಲ್ಲಿ ಜನಾಂಗೀಯ ಕ್ರೀಡೆಯು ಕೊಡವ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇತರೆ ಜನಾಂಗಗಳಿಗೂ, ಇತರ ಕ್ರೀಡೆಗಳಿಗೂ ವಿಸ್ತರಿಸಿ ಇತಿಹಾಸ ಸೃಷ್ಟಿಸಿತು. ಕೊಡಗಿನಲ್ಲಿ ಏಪ್ರಿಲ್-ಮೇ ತಿಂಗಳು ಎಲ್ಲೆಂದರಲ್ಲಿ ಕ್ರೀಡೆಯ ಕಲರವ ಕಂಡುಬರುತ್ತಿತ್ತು. ಇದಕ್ಕೆ ನಾಂದಿ ಹಾಡಿದವರು ಕುಟ್ಟಪ್ಪ ಸಹೋದರರು. ಇದರ ಪೂರ್ಣ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಕೊಡಗು ಆರಂಭದ ದಿನಗಳಿಂದಲೂ ಹಾಕಿ ಪಂದ್ಯಾವಳಿಗಳ ತವರೂರಾಗಿತ್ತು. ನಂತರದ ದಿನಗಳಲ್ಲಿ ಅಂದರೆ 90ರ ದಶಕದಲ್ಲಿ ಪಂದ್ಯಾವಳಿಯ ಕೊರತೆ ಎದ್ದು ಕಾಣುತ್ತಿತ್ತು. ಅಂತಹ ಸಮಯದಲ್ಲಿ ಕೊಡಗಿನ ಹಾಕಿಗೆ ಪುನರ್ ಚೇತನ ನೀಡಿದ್ದು ಈ ‘ಹಾಕಿ ನಮ್ಮೆ’. ಹಾಕಿ ನಮ್ಮೆ ಆರಂಭಿಸಿದ್ದು ಹಾಕಿ ರಂಗದಲ್ಲಿ ಒಂದು ವಿದ್ಯುತ್ ಸಂಚಲನ ಉಂಟುಮಾಡಿತ್ತು. ಸುಮಾರು 22 ವರ್ಷಗಳ ಕಾಲ ಕುಟುಂಬವೊಂದು ಪಂದ್ಯಾಟವನ್ನು ನಡೆಸಿಕೊಂಡು ಬರುವುದು, 300ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವುದು, ಆಟಗಾರರ ಭಾಗವಹಿಸುವಿಕೆ, ತಾಂತ್ರಿಕ ಸಮಿತಿಯ ಮತ್ತು ತೀರ್ಪುಗಾರರ ಬೆಂಬಲ, ಕುಟುಂಬದವರ ಪರಿಶ್ರಮ ಎಲ್ಲವೂ ಪುಟ್ಟ ಜಿಲ್ಲೆಯೊಂದರಲ್ಲಿ ಊಹಿಸಲು ಅಸಾಧ್ಯ.

ತಿಂಗಳುಗಳ ಕಾಲ ನಡೆಯುವ ಪಂದ್ಯಾವಳಿಯನ್ನು ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಅದರಲ್ಲಿ ತೊಡಗಿಸಿಕೊಳ್ಳುವುದು ಒಂದು ಸಾಹಸ. ಅದರೊಡನೆ ಅದನ್ನು ಆಯೋಜನೆ ಮಾಡುವ ಕುಟುಂಬದವರು ಕಡಿಮೆ ಎಂದರೆ 2 ವರ್ಷಗಳಿಂದ ಪೂರ್ವಭಾವಿ ಸಿದ್ಧತೆಯನ್ನು ಪ್ರಮುಖವಾಗಿ ಆರ್ಥಿಕ ಕ್ರೋಢೀಕರಣ ಮುಖ್ಯ. ಏಕೆಂದರೆ ಆರಂಭದ ದಿನಗಳಲ್ಲಿ ಯಾವುದೇ ಪ್ರಾಯೋಜಕತ್ವ ಇಲ್ಲದೇ ಪಂದ್ಯಾಟವನ್ನು ಕುಟುಂಬವೊಂದು ನಡೆಸುತ್ತಿತ್ತು ಎಂದರೆ ವಿಶೇಷ ಎನ್ನಬಹುದು.

ನಂತರದ ದಿನಗಳಲ್ಲಿ ಇದು ಬೆಳೆದಂತೆ ಹಾಕಿ ನಮ್ಮೆಗೆ ವಾಣಿಜ್ಯೀ ಕರಣ ಸೋಕಿತು ಎನ್ನಬಹುದು. ಆನಂತರ ಅದು ಅದ್ದೂರಿತನ ಪಡೆಯಿತು. ಇದರಿಂದ ಹಾಕಿ ನಮ್ಮೆಯ ಮೂಲ ಉದ್ದೇಶ ಮರೆಯಾಯಿತು ಎನ್ನಬಹುದು. ಯಾವ ಹಾಕಿ ನಮ್ಮೆ ಕೊಡಗಿನಲ್ಲಿ ನಿರಂತರವಾಗಿ ಹಾಕಿ ಕಲರವವನ್ನು ಹುಟ್ಟು ಹಾಕಬೇಕಿತ್ತೋ ಅದು ಕೇವಲ ಏಪ್ರಿಲ್ ಮೇ ತಿಂಗಳಿಗೆ ಸೀಮಿತ ವಾಯಿತು. ಆಟಗಾರರು ಕೂಡ ಪಂದ್ಯಾಟಕ್ಕೆ ಆರಂಭದ ಮೊದಲು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸೋತ ನಂತರ ಮೈದಾನದಿಂದ ದೂರ ಉಳಿಯುತ್ತಾರೆ. ಇಂತಹ ಬೆಳವಣಿಗೆಯಿಂದ ಹಾಕಿ ಬೆಳೆಯದು. ಹಾಕಿ ನಮ್ಮೆಯ ಉದ್ದೇಶ ಪರಿಪೂರ್ಣವಾಗದು. ಸ್ಥಳೀಯವಾಗಿ ಎಲ್ಲಾ ಕುಟುಂಬದ ಆಟಗಾರರು ಅಥವಾ ಆಯಾ ಗ್ರಾಮದ ಆಟಗಾರರು ವರ್ಷಪೂರ್ತಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿಕೊಂಡು ಅಭ್ಯಾಸದಲ್ಲಿ ತೊಡಗಬೇಕು. ಇದರಿಂದ ಸ್ಥಳೀಯವಾಗಿ ಆಟಗಾರರು ಹೊರಹೊಮ್ಮುತ್ತಾರೆ.

ಕಳೆದ 22 ವರ್ಷಗಳಿಂದ ಪಂದ್ಯಾವಳಿಗಳನ್ನು ನಾವು ಅವಲೋಕಿಸಿದಾಗ ವಿಜೇತ ತಂಡಗಳು ಹೆಚ್ಚಾಗಿ ಪುನರಾವರ್ತನೆಗೊಂಡಿದೆ. ಪಂದ್ಯಾವಳಿಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಕಾರಗೊಳಿಸಿದವರು ಗೆಲುವಿನ ರೂವಾರಿ ಎನಿಸಿಕೊಂಡವರು ಬಹುತೇಕ ಅನುಭವಿ ಹಿರಿಯ ಆಟಗಾರರೆ.

ಏಕೆಂದರೆ ಅವರು ದೀರ್ಘಕಾಲ ತಮ್ಮನ್ನು ತಾವು ಕ್ರೀಡಾ ಮೈದಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೊಸ ಆಟಗಾರರಲ್ಲಿ ಈ ನ್ಯೂನತೆ ಎದ್ದು ಕಾಣುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಮಿತಿ, ತೀರ್ಪುಗಾರರ ಅಕಾಡೆಮಿಗಳ ನಡುವೆ ಸ್ವಲ್ಪ ಮಟ್ಟಿಗೆ ವೈಮನಸ್ಸು ಬೆಳೆದಿದ್ದು, ಎದ್ದು ಕಾಣುತ್ತದೆ. ಇದು ಕೊಡವ ಹಾಕಿ ನಮ್ಮೆಯ ಬೆಳೆವಣಿಗೆಗೆ ಪೂರಕವಾದ ನಡವಳಿಕೆ ಅಲ್ಲ ಎನ್ನಬಹುದು. ಕೊಡವ ಹಾಕಿ ನಮ್ಮೆ ಬೆಳೆಯಲು ತಾಂತ್ರಿಕ ಸಮಿತಿಯ ತೀರ್ಪುಗಾರರ ಪರಿಶ್ರಮ ಸಾಕಷ್ಟಿದೆ. ಅದೇ ರೀತಿ ಅವರುಗಳು ಕೂಡ ಆಯೋಜಿಸಿರುವ ಕುಟುಂಬದವರ ಪರಿಶ್ರಮವನ್ನು ಗಮನಿಸಬೇಕು. ಎಲ್ಲರೂ ಹೊಂದಾಣಿಕೆ ಮಾಡಿ ಕೊಂಡರೆ ಮಾತ್ರ ಹಾಕಿ ನಮ್ಮೆ ಉಳಿಯಲು ಹಾಗೂ ಬೆಳೆಯಲು ಸಾಧ್ಯ.

ಕುಟ್ಟಪ್ಪ ಸಹೋದರರ ಕನಸು ಸಾಕಾರಗೊಳಿಸುವ ಜವಾಬ್ದಾರಿ ಕೊಡಗಿನ ಕ್ರೀಡಾಭಿಮಾನಿಗಳ, ಕ್ರೀಡಾಪಟುಗಳ, ತೀರ್ಪುಗಾರರ ಮೇಲಿದೆ. ಪಂದ್ಯಾವಳಿಯನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸಿ ತಾತ್ಕಾಲಿಕ ವ್ಯವಸ್ಥೆಗೆ ಲಕ್ಷಾಂತರ ಹಣವನ್ನು ಪೋಲು ಮಾಡುವ ಬದಲು ನಿಗದಿತ ಎರಡು-ಮೂರು ಸ್ಥಳಗಳಲ್ಲಿ ಆಯೋಜಿಸಿ ಬರುವ ಅನುದಾನದಿಂದ ಕ್ರೀಡಾಕೂಟ ನಡೆಯಲು ಶಾಶ್ವತ ನೆಲೆಗಟ್ಟನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಆದರೆ ಯಾರೂ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿಲ್ಲ.

ಕೊಡವ ಹಾಕಿ ನಮ್ಮೆ ಇದುವರೆಗೆ ಶಿಸ್ತುಬದ್ಧ ಪ್ರದರ್ಶನ ಕಂಡಿದೆ. ಕೆಲವು ವೇಳೆ ಸ್ವಲ್ಪ ಅತೃಪ್ತಿ ಕಂಡರು ಇದು ಕ್ರೀಡೆಯಲ್ಲಿ ಸರ್ವೇ ಸಾಮಾನ್ಯ. ಏನೇ ಆಗಲಿ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿಯು ಕ್ರೀಡಾರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಕೊಡಗಿನಲ್ಲಿ ಮಾರ್ಚ್-15 ರಿಂದ ಏಪ್ರಿಲ್-15 ರವರೆಗೆ ಹೇಗೆ ದೇವರ ಮತ್ತು ಊರ ಉತ್ಸವಗಳು ಹಬ್ಬಗಳು ನಡೆಯುತ್ತದೆಯೋ ಅದೇ ರೀತಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಡಗಿನುದ್ದಕ್ಕೂ ಕ್ರೀಡಾ ಕಲರವ ಕಂಡುಬರುತ್ತದೆ.

ಕಳೆದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳಿಂದ ಇದು ಕಂಡುಬಾರದಿದ್ದರೂ ಮುಂದಿನ ದಿನಗಳಲ್ಲಿ ಇದು ಪುನಃ ಆರಂಭವಾಗಲಿ. ಅದಕ್ಕೆ ಕಾರಣ ಕರ್ತರಾದ ಪಾಂಡಂಡ ಕುಟ್ಟಪ್ಪ ಕುಟ್ಟಣಿ ಸಹೋದರರು ಕೊಡಗಿನ ಕ್ರೀಡಾ ಕ್ಷೇತ್ರದಲ್ಲಿ ನಕ್ಷತ್ರವಾಗಿ ಉಳಿಯಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ.

- ಬಾಳೆಯಡ ಕಿಶನ್ ಪೂವಯ್ಯ, ವಕೀಲರು-ನೋಟರಿ, ಮಡಿಕೇರಿ.