ಸಿದ್ದಾಪುರ, ಏ. 16: ನೆಲ್ಲಿಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಅತ್ತಿಮಂಗಲ ಬೆಟ್ಟದಾಡು ನಲ್ವತ್ತೇಕ್ರೆ ಭಾಗದಲ್ಲಿ ಮರಿ ಆನೆಗಳು ಸೇರಿದಂತೆ 20 ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ದಾಂಧಲೆ ನಡೆಸುತ್ತಿವೆ. ಬೆಟ್ಟದಕಾಡುವಿನ ಎಂ.ಜಿ. ಕಾಲೋನಿ ಸಮೀಪ ರಾತ್ರಿ ಸಮಯದಲ್ಲಿ ಕೆಲವು ಮನೆಗಳ ಸಮೀಪ ಸುತ್ತಾಡಿದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.