ಕುಶಾಲನಗರ, ಏ. 16: ಕುಶಾಲನಗರ- ಮೈಸೂರು ಕಡೆಯಿಂದ ಜಿಲ್ಲೆಗೆ ಆಗಮಿಸಿದ ಸುಮಾರು ಇನ್ನೂರಕ್ಕೂ ಅಧಿಕ ಮಂದಿಗೆ ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಕೊರೊನಾ ಕ್ವಾರಂಟೈನ್ ಸೀಲು ಹಾಕಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಳೆದ ಮೂರು ದಿನಗಳಿಂದ ಜಿಲ್ಲೆಗೆ ಆಗಮಿಸುವ ಹಲವರನ್ನು ಪತ್ತೆಹಚ್ಚಿ ಈ ಕ್ರಮ ಕೈಗೊಳ್ಳುತ್ತಿದ್ದಾರೆ. ಮೈಸೂರು ಬೆಂಗಳೂರು ಕಡೆಯಿಂದ ವಾಹನಗಳಲ್ಲಿ ಆಗಮಿಸುವ ಜನರನ್ನು ಪತ್ತೆ ಹಚ್ಚಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ 36 ಮಂದಿಗೆ ಆರೋಗ್ಯ ಇಲಾಖೆ ಸಹಾಯದೊಂದಿಗೆ ಕ್ವಾರಂಟೈನ್ ಸೀಲು ಹಾಕಲಾಗಿದ್ದು ಇದುವರೆಗೆ ಮೂರು ದಿನಗಳ ಅವಧಿಯಲ್ಲಿ ಕುಶಾಲನಗರ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಇನ್ನೂರಕ್ಕೂ ಅಧಿಕ ಮಂದಿಗೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.