ಮಡಿಕೇರಿ, ಏ. 15: ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ವ್ಯಕ್ತಿ ಜ್ವರದ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದುಬೈನಿಂದ ಹಿಂತಿರುಗಿ ಬಂದ ವೇಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಸೋಂಕಿರುವ ದೃಢಪಟ್ಟ ಬಳಿಕ 14 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ಕೊಂಡಂಗೇರಿ ಕೇತುಮೊಟ್ಟೆಯ ನಿವಾಸಿ ಎಂಟು ದಿನಗಳ ಬಳಿಕ ಇಂದು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಅವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರಿನ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆ ವ್ಯಕ್ತಿಯನ್ನು ಐಸೊಲೇಷನ್ ವಾರ್ಡ್‍ಗೆ ದಾಖಲು ಮಾಡಲಾಗಿದ್ದು, ತಾ. 16 ರಂದು (ಇಂದು) ಬೆಳಿಗ್ಗೆ ಲ್ಯಾಬ್ ಪರೀಕ್ಷಾ ವರದಿ ಕೈಸೇರುವ ಸಾಧ್ಯತೆಯಿದೆ.